Saturday 28 July, 2012

ನಮ್ಮ ಗಿಡ ಮರಬಳ್ಳಿಗಳು-ಕಸ್ತೂರಿ ಅರಿಶಿನ


ಕಸ್ತೂರಿ ಅರಿಶಿನ   Curcumaa aromatica,salisb ,yello zedoary 

      ಇದನ್ನು  ಉತ್ತರ ಕನ್ನಡ  ಕರಾವಳಿಯ ಬಹು ಜನರು ನೋಡಿಲ್ಲ. ಇತ್ತೀಚೆಗೆ ಕೆಲವು ಸೌಂದರ್ಯ ಪ್ರಜ್ಞೆಯುಳ್ಳ  ಹುಡುಗಿಯರು ಪತ್ರಿಕೆಗಳಲ್ಲಿ ಇದರ ಹೆಸರನ್ನು ಓದಿರಬಹುದು. ಕೇರಳಿಗರು ಇದನ್ನು ಕಸ್ತೂರಿ ಮಂಜಿಲ್ ಎನ್ನುತ್ತಾರೆ. ಸಂಸ್ಕೃತದಲ್ಲಿ ಇದಕ್ಕೆ ವನ ಹರಿದ್ರಾ ಎಂಬ ಹೆಸರಿದೆ.
      
  ಇದು ಅರಿಶಿನದ ಗಿಡದ ಹೋಲಿಕೆಯ್ಳ್ದಳ್ಳದ್ದು . ಅರಿಶಿನದ ಗಿಡಕ್ಕಿಂತ ಹೆಚ್ಚು ಬಲಶಾಲಿ ಎತ್ತರವಾಗಿ ಬೆಳೆಯುತ್ತದೆ. ಇದರ ಗಡ್ಡೆಯ ಅರಿಶಿನದ ಗಡ್ಡೆಯನ್ನು ಹೆಚ್ಚು ಹೋಲುತ್ತದೆ. ಅರಿಶಿನದ ಬಣ್ಣ ಮತ್ತು ಅದರ ಪರಿಮಳ ಇದಕ್ಕಿದೆಯಾದರೂ ಇದಕ್ಕೆ ಅರಿಶಿನಕ್ಕಿಂತ ಬೇರೆಯಾದ ಘಾಡವಾದ ದಿವ್ಯ ಪರಿಮಳವಿರುತ್ತದೆ. ಅರಿಶಿನ ಗಿಡದ ಬಳಿಯಲ್ಲಿ ಇದು ಬೆಳೆದರೆ ಇದನ್ನು ಗಿಡವಾಗಿರುವಾಗಲೇ ಗುರುತಿಸಿ ಪ್ರತ್ಯೇಕಿಸಿಕೊಳ್ಳಬೇಕು. ಏಕೆಂದರೆ ಇದರ ಗಡ್ಡೆಯನ್ನು ನೋಡಿ ಸುಲಭದಲ್ಲಿ ಗುರುತಿಸಲಾಗುವದಿಲ್ಲ. ಆದರೆ ಗಿಡವು ಬಿಸಿಲಿನಲ್ಲಿ ಬೆಳೆದು ನಿಂತಾಗ ಪ್ರತಿ ಎಲೆಯ ನಡುವೆ ಎಲೆಯ ತುದಿಯಿಂದ ಬುಡದವರೆಗೆ ಉದ್ದವಾಗಿರುವ ಬೆರಳಿನಷ್ಟು ಅಗಲದ ಕುಂಕುಮ ಬಣ್ಣದ ಮೋಹಕವಾದ ಪಟ್ಟಿಯನ್ನು ಕಾಣಬಹುದು.

     ಇದು ಈ ಕರಾವಳಿಯಲ್ಲಿ   ಕಾಡು ಕಚೋರವೆಂದು ಗುರುತಿಸಲಾಗುವ  ಕಾಡರಶಿಣಕ್ಕಿಂತ  ಬೇರೆಯಾದ ನಡು ಪಟ್ಟಿಯನ್ನು ಹೊಂದಿರುತ್ತದೆ. ಅಂದರೆ ಕಾಡು  ಅರಿಶಿಣದ ನಡು ಪಟ್ಟಿಯು ಎಲೆಯ  ನಡುವಿನವರೆಗೆ ಮಾತ್ತ್ರ  ಇರುತ್ತದೆ.  ಆದರೆ ಕಸ್ತೂರಿ ಅರಿಶಿಣದ ನಡು ಪಟ್ಟಿಯು  ಎಲೆಯ ಬುಡ ಭಾಗವನ್ನು ಮುಟ್ಟುತ್ತದೆ..  

    ಕರಾವಳಿಯಲ್ಲಿ  ಕಸ್ತೂರಿ ಅರಶಿಣವನ್ನು ಮನೆ ಅರಶಿಣದಂತೆ  ಬಳಸುತ್ತಿರುವದು ಕಂಡು ಬಂದಿಲ್ಲ.  ಗ್ರಂಥಿಗೆ ಅಂಗಡಿಗಳಲ್ಲಿ ಇದರ ಪುಡಿ ಸಾಕಷ್ಟು ದೊರೆಯುತ್ತದೆ. ಮುಖಕಾಂತಿಗಾಗಿ ಅನಾವಶ್ಯಕ. ರೋಮ ಮತ್ತು ಮೊಡವೆ ನಿವಾರಣೆಗಾಗಿ ಅದರ ಪುಡಿಯನ್ನು ಲೇಪನವಾಗಿ ಬಳಸಲಾಗುತ್ತದೆ.  

    ಇದರ ಪುಡಿಯನ್ನು ಹಾಲಿನ ಕೆನೆಯಲ್ಲಿ ಅಥವಾ ಕಡಲೆ ಹಿಟ್ಟಿನ ಜೊತೆ ನೀರಿನಲ್ಲಿ ಕಲಸಿ ಮುಖಕ್ಕೆ ಲೇಪಿಸಿಕೊಳ್ಳಬೇಕೆಂದು ಸೌಂದರ್ಯವರ್ಧನೆ  ಕುರಿತು  ಟಿಪ್ಪಣಿಸುವವರು  ಬರೆಯುತ್ತಾರೆ..

     ಮುಖ ಮತ್ತು ಮೈ ಕಾಂತಿಯನ್ನು ಹೆಚ್ಚಿಸುವ  ಹರ್ಬಲ್ ಔಷಧಗಳಲ್ಲಿ ಇದರ ಬಳಕೆಯಿದೆ. ಚೀನಾದೇಶದಲ್ಲಿ ಇದನ್ನು ಕ್ಯಾನ್ಸರ್ ನಿರೋಧಕ ಔಷಧ ತಯಾರಿಕೆಯಲ್ಲಿ ಬಳಸುತ್ತಿರುವದಾಗಿ ತಿಳಿದು ಬರುತ್ತದೆ. ಮೇಘಾಲಯದ ಖಾಸಿ ಬುಡ ಕಟ್ಟಿನವರು ಹೊಟ್ಟೆಯ ಜಂತು ನಿವಾರಣೆಗೂ ಇದನ್ನು ಬಳಸುತ್ತಿರುವದಾಗಿ ತಿಳಿದು ಬರುತ್ತದೆ. ಮನೆಯಂಗಳದಲ್ಲಿ ಇದರ ಚಿಕ್ಕ ಗಡ್ಡೆಯನ್ನು ನೆಟ್ಟು ಇದರ ಸಂತತಿಯನ್ನು ಹೆಚ್ಚಿಸಿ   ನಿಮ್ಮ ಪರಿಚಿತರಿಗೆ  ನೀಡಿ  ಸಂತೋಷ ಪಡಬಹುದು.
                             
  

No comments:

Post a Comment