Friday 2 November, 2012


ಹಿಟ್ಟುಂಬೆ :
 
ವಂದೂರಿಲಿ ವಂದಬ್ಬೆ ಮಗಾಯಿದ್ದಿದ್ದೊ. ಅದ್ರ ಅಬ್ಬೆ ಮನೆಲಿ ಬಡ್ವರಾಗಿದ್ದೊ. ವಂದಿನಾ ಅಬ್ಬೆ ತಮಾ ಅಜ್ನ ಮನೆಲಿ ಕರುಯಿಲ್ಲೆ. ವಂದನಿ ಮಜ್ಗೆ ನೀರ್ಕೊಡ್ತೆ ಕೊಟ್ಟಿಕ್ಕಿ ಬಾ ಅಂತು. ಅಂವಾ ಮಜ್ಗೆ ನೀರ್ತೆಕ್ಕಂಡೋಗಿ ವಂದ್ಗದ್ದೆ ಬಯ್ಲಲಿಟ್ಕಂಡಿ ಉಚ್ಚಿ ಹೊಯ್ಯಲಕ್ಕುಂತ್ಕಳ್ತಿದ್ದಾ. ಆಗಾ ಹತ್ತಿಪ್ಪತ್ ಹಿಟ್ಟುಂಬೆ ಆಯ್ಕಂಡಿ ಬತ್ತೊ. ಬಂದ್ಕಂಡಿ ಅವ್ನ ಮಜ್ಗೆ ನೀರೆಲ್ಲಾ ಕೊಂಡ್ಬಿಡ್ತೊ. ಬರಿತಟ್ಟೆ ಮನೆಗ್ತೆಕ್ಕಂಡೋಗ್ತಿದ್ದಾ. ವಂದಿನಾ ಕಳತ್ತು. ಯೆರಡ್ದಿನಾ ಕಳತ್ತು. ಮೂರ್ದಿನಾ ಕಳತ್ತು. ವಂದಿನಾ ಅಂವಾ ``ಅಬ್ಬೆ, ಗೆದ್ದೆ ಬಯ್ಲಲ್ಲಿ ತಟ್ಟೆಯಿಟ್ಕಂಡು ಉಚ್ಚಿ ಹೊಯ್ಯುಲೆ ಕುತ್ಗತ್ತೆ. ಅದೆಂತಾ ಕೊಂಡ್ಬಿಡ್ತೊ. ಮಜ್ಗೆ ನೀರೆ ಯಿರ್ತಿಲ್ಲೆ'' ಅಂತಾ. ಆಗಾ ಅಬ್ಬೆ ``ನಾಳಂಗ್ನೋಡು. ಯಾರ್ಬತ್ತೊ ನೋಡು. ಅಂತು

ಮರ್ದಿನಾ ಮಾಣಿ ಮಜ್ಗೆ ನೀರ್ತೆಕ್ಕಂಡೋಗಿ ಗೆದ್ದೆ ಬಯ್ಲಲಿಟ್ಕಂಡಿ ಉಚ್ಚಿ ಹೊಯ್ಯುಲೆ ಕುಂತ್ಕಂತಾ. ನೋಡ್ತ್ನೆ ಯಿರ್ತಾ. ಆಗಾ ವಂದಿಟ್ಟುಂಬೆ ಮುಂದ್ಬಂತು. ಕೊಂಬ್ಲೆ. ಆಗೊಂದ್ಗುದ್ಕೊಟ್ಟಾ ಹಿಟ್ಟುಂಬೆಗೆ ಹೆತ್ ಹಿಟ್ಟುಂಬೆ ಸತ್ಯೊ'' ಕೇಳ್ದಾ.

ಆ ಹಿಟ್ಟುಂಬೆ ಯಂತಾ ಅಂತು ಅಂದ್ರೆ;ಮಜ್ಗೆ ನೀರ್ಕೊಂಡೆ ಬೆನ್ಗುದ್ಸಗಂಡೆ'' ಅಂತು. ಆ ಮಾಣಿ ಸಿಟ್ಬಂದಿ ಆ ಹಿಟ್ಟುಂಬೆ ತೆಕ್ಕಂಡೋಗಿ ಬಿಸಿಯೆಣ್ಣೆ ಗೊಜ್ಗುಡ್ಸಗಂಡಿ ಅದ್ರಲ್ಲಿ ಹೊತಾಕ್ದಾ.ಹಿಟ್ಟುಂಬೆ ಹಿಟ್ಟುಂಬೆ ಸತ್ಯೊ ಕೇಳ್ತಾ'' ಆಗಾ ಹಿಟ್ಟುಂಬೆ

   ಮಜ್ಗೆ ನೀರ್ಕೊಂಡೆ ಬೆನ್ಗುದ್ಸಸ್ಗಂಡೆ ಯಣ್ಣೆ ಕಿಟ್ಟಸ್ಕಂಡೆ'' ಅಂತು. ಅಲ್ಲಿಂದ್ತೆಕ್ಕಂಡೋಗಿ ಬಿಸಿ ಬಿಸಿ ಗೊಡ್ಗುಟ್ಟು ನೀರಿಲಿ ಹಾಕ್ದಾ. ಆಗಾ ಹಿಟ್ಟುಂಬೆ ಮಜ್ಗೆ ನೀರ್ಕೊಂಡೆ ಬೆನ್ಗುದ್ದಸ್ಗಂಡೆ ಯಣ್ಣೆ ಕಿಟ್ಟಸ್ಕಂಡೆ ಮಿಂದ್ಕತ್ತೆ'' ಅಂತು. ಅದ್ರ ತೆಕ್ಕಂಡೋಗಿ ಉಪ್ಪನ ಕಾಯ್ಪಾತ್ರದಲ್ಲಾಕ್ತಾ.

ಹಿಟ್ಟುಂಬೆ ಹಿಟ್ಟುಂಬೆ ಸತ್ಯೊ'' ಕೇಳ್ತಾ. ಆಗಾ ಹಿಟ್ಟುಂಬೆ ಮಜ್ಗೆ ನೀರ್ ಕೊಂಡೆ ಬೆನ್ಗುದ್ಸಗಂಡೆ ಯಣ್ಣೆ ಕಿಟ್ಟಸ್ಕಂಡೆ ಮಿಂದ್ಕಂಡೆ ಉಪ್ಪನ ಕಾಯ್ತೆಗೆತೆ'' ಅಂತು. ಕಡೆಗೆ ಅದರ್ನಾ ತೆಕ್ಕಂಡೋಗಿ ಬಿಸಿ ಬಿಸಿ ಗಂಜೀ ಪಾತ್ರದಲ್ಲಿ ಹಾಕ್ತಾ.ಹಿಟ್ಟುಂಬೆ ಹಿಟ್ಟುಂಬೆ ಸತ್ಯೊ'' ಕೇಳ್ತಾ. ಹಿಟ್ಟುಂಬೆ ಮಜ್ಗೆ ನೀರ್ಕೊಂಡೆ, ಬೆನ್ಗುದ್ಸಗಂಡೆ ಯಣ್ಣೆ ಕಿಟ್ಟಸ್ಕಂಡೆ, ಮಿಂದ್ಕಂಡೆ, ಉಪ್ಪನ ಕಾಯ್ತೆಗ್ದೆಗಂಜೀ ಉಣ್ತೆ'' ಅಂತು. ಅದರ್ನಾ ತೆಕ್ಕಂಡೋಗಿ ಬೊಂಡೊಯ್ಗೆಲಿ ಹೊತಾಕ್ತಾ..

ಹಿಟ್ಟುಂಬೆ ಹಿಟ್ಟುಂಬೆ ಸತ್ಯೊ ಕೇಳ್ತಾ'' ಹಿಟ್ಟುಂಬೆ ಮಜ್ಗೆ ನೀರ್ಕೊಂಡೆ, ಬೆನ್ಗುದ್ಸಗಂಡೆ, ಯೆಣ್ಣೆಕಿಟ್ಸಕ್ಕಂಡೆ, ಮಿಂದ್ಕಂಡ್ದೆ ಉಪ್ಪನಕಾಯ್ತೆಗ್ದೆ ಗಂಜಿ ಉಂಡೆ.ಯೀಗಾ ಹೊಡಿಯಾಟಾ ಆಡ್ತೆ'' ಅಂತು. ಹಿಟ್ಟುಂಬೆ ತೆಕ್ಕಂಡೋಗಿ ಸಮುದ್ರದಲ್ಲಿ ಹೊತಾಕ್ತಾ. ಹೊತಾಯ್ಕಂಡಿ ಹಿಟ್ಟುಂಬೆ ಹಿಟ್ಟುಂಬೆ ಸತ್ಯೊ''  ಕೇಳ್ತಾ. ಮಜ್ಗೆ ನೀರ್ ಕೊಂಡೆ ಬೆನ್ಗುದ್ಸಗಂಡೆ ಯೆಣ್ಣೆ ಕಿಟ್ಸಗಂಡೆ, ಮಿಂದ್ಕಂಡೆ. ಉಪ್ಪಿನ ಕಾಯ್ತೆಗ್ದೆ. ಗಂಜೀ ಉಂಡೆ ಹೊಡಿಯಾಟಾ ಆಡ್ದೆ. ಯೀಗಾ ಸಮುದ್ರಾ ಮೀಯ್ತೆ ಅಂಬು'' ಅದರ್ನಾ ತೆಕ್ಕಂಡೋಗಿ ಬೆಂಕಿಲಾಕ್ತಾ. ಹಿಟ್ಟುಂಬೆ ಹಿಟ್ಟುಂಬೆ ಸತ್ಯೊ'' ಕೇಳ್ತಾ. ಮಜ್ಗೆ ನೀರ್ಕೊಂಡೆ, ಬೆನ್ಗುದ್ಸಗಂಡೆ ಯೆಣ್ಣೆ ಕಿಟ್ಸಕಂಡೆ ಮಿಂದ್ಕಂಡೆ ಉಪ್ಪನಕಾಯ್ತೆಗ್ದೆ, ಗಂಜೀ ಉಂಡೆ ಹೊಡಿಯಾಟಾ ಆಡ್ದೆ ಸಮುದ್ರಾ ಮಿಂದೆ ಬೆಂಕಿಲ್ಬಿದ್ಸತ್ತೆ'' ಅಂಬು. ಹಾಂಗ್ಬಾ ಯೀಗ್ಸತ್ಯೊ'' ಹೇಳಿಕ್ಕಿ ಕಡೆಗೆ ದಿನಾವಾ ಅಜ್ಜಿ ಮನ್ಗೋಗಿ ಮಜ್ಗೆ ನೀರ್ ಕೊಟ್ಟಿಕ್ಕಿಯಾ ಬರ್ತಿದ್ದಾ.


ಪ್ರಕಟಿತ ಪುಸ್ತಕಗಳು-ಕನ್ನಡ ಜನಪದ ಸಸ್ಯನಾಮಗಳು


ಕನ್ನಡ ಜನಪದ ಸಸ್ಯನಾಮಗಳು 2011                  ಕರ್ನಾಟಕ ಜಾನಪದ ಪರಿಷತ್ತು ಬೆಂಗಳೂರು

Kannada Janapada Sasyanamagalu- A pen Portrait by
Shanti Nayaka Published by Karnataka Janapada Parishst,
# 1,Jaladarshini Layout, Near M.S Ramaiah Hospital Main Gate, New B E L
Road, Bangalore Loka: 27201143

Wednesday 26 September, 2012

ಪ್ರಕಟಿತ ಪುಸ್ತಕಗಳು- ಜಾನಪದ ಲೇಖನ ಸಂಚಯ



ಜಾನಪದ ಲೇಖನ ಸಂಚಯ 2005 
ಕರಾವಳಿ ಜಾನಪದದ ಉಪಯುಕ್ತ ಆಕರ- ಡಾ.ಜಿ.ಆರ್.ತಿಪ್ಪೇಸ್ವಾಮಿ

     ಜಾಗತೀಕರಣ ಪ್ರಕ್ರಿಯೆಗೆ ಪರ್ಯಾಯವಾಗಿ ಜಾನಪದವನ್ನು ಅರ್ಥೈಸಿಕೊಳ್ಳುತ್ತಿರುವ  ದಿನಗಳಲ್ಲಿ ಶಾಂತಿ ನಾಯಕರ `ಜಾನಪದ ಲೇಖನ ಸಂಚಯ' ಹೊರಬಂದಿದೆ. ಇಲ್ಲಿನ ಹನ್ನೆರಡು ಬರಹಗಳಲ್ಲಿ ಬಹುಪಾಲು ಕಳೆದ ತೊಂಬತ್ತರ ದಶಕದಲ್ಲಿ ವಿವಿಧ ಪತ್ರಿಕೆಗಳಲ್ಲಿ ಬೆಳಕು ಕಂಡವು. ಕರಾವಳಿ ಪ್ರದೇಶವನ್ನು ಕೇಂದ್ರವಾಗಿಸಿಕೊಂಡ ಕ್ಷೇತ್ರ  ಕಾರ್ಯ ಆಧಾರಿತ ಅಧ್ಯಯನದ ಫಲಿತಗಳಿವು. ಕೃಷಿ, ಅಡುಗೆ, ಕಲೆ, ದೈವ ಮುಂತಾದ ಅಲ್ಲಿಯ ಬದುಕಿನ ಬಹು ಮುಖ್ಯಭಾಗವೆನಿಸಿದ ಮೌಖಿಕ ಪರಂಪರೆಯ ಸಂಗತಿಗಳೆಲ್ಲ ಚರ್ಚೆಗೆ ಒಳಪಟ್ಟಿರುವುದರಿಂದ ಇಲ್ಲಿಯ ಪ್ರತಿಯೊಂದು ಬರಹವು ಶೋಧನಾತ್ಮಕ ಚೌಕಟ್ಟನ್ನು ಹೊಂದಿದೆ. 

ಕೃಷಿಕರ ದೀಪಾವಳಿಯನ್ನು ಕುರಿತು ಬರೆಯುವಾಗ ಶಾಂತಿ ನಾಯಕರು ಅದನ್ನು ಕೇವಲ ಆಚರಣೆಯಾಗಿ ನೋಡುವುದಿಲ್ಲ. ಆರೋಗ್ಯ ಮತ್ತು ಅನ್ನ ನೀಡುವ ಭೂಮಿಯನ್ನು ಪೂಜಿಸುವ ಹಿನ್ನೆಲೆಯ ಅರ್ಥಗಳನ್ನು ಸ್ಪಷ್ಟಪಡಿಸುತ್ತಾರೆ. ಒಗ್ಗರಣೆ, ಜಟಗ, ಕರಾವಳಿಯ ಪ್ರಾಣಿ ವಸತಿ, ನಾಡವರು , ರಂಗೋಲಿ, ಮಾಸ್ತಿ ಜಟಗಗಳ ಮತಾಂತರ , ನನ್ನಿ ಮುಂತಾದ ಬರಹಗಳಲ್ಲಿ ಪದ ನಿಷ್ಪತಿಯಿಂದ ಆರಂಭಗೊಂಡು ಅವುಗಳ ತಲಸ್ಪರ್ಶಿಯಾದ ಅರ್ಥ ಸ್ವರೂಪಗಳನ್ನು ಕಂಡುಕೊಳ್ಳುವ ಹಾದಿಯನ್ನು ಇಲ್ಲಿ ಗುರುತಿಸಬಹುದು. 

ಒಗ್ಗರಣೆ ಬಗೆಗಿನ ಲೇಖನದಲ್ಲಿ ಅಡುಗೆ ಕಲೆಯಲ್ಲಿ ಬಳಕೆಗೊಂಡಿರುವ ಪೊಡ್ಡಣಿಗೆ, ಅಗ್ಗರಣೆ, ವೊಗ್ಗರಣೆ,  ಅಗ್ಗರಿಸು, ಉಕ್ಕರಿಸು, ಒಗ್ಗರಿಸು ಮುಂತಾದ ತಾಂತ್ರಿಕ ಶಬ್ದಗಳನ್ನು ಕುರಿತ ಮಾಹಿತಿ ಇದೆ. ವಿಶೇಷವಾಗಿ ಸೂಪಶಾಸ್ತ್ರ ಹಾಗೂ ಲೋಕೋಪಕಾರ ಗ್ರಂಥಗಳನ್ನು ಆಧರಿಸಿ ಈ ಪದಗಳ ಅರ್ಥದ ಅನನ್ಯತೆಯನ್ನು ಗುರುತಿಸಿರುವ ಪ್ರಯತ್ನ ಮೆಚ್ಚುವಂತಹದು. 

 ಊರಿನ ರಕ್ಷಾ ದೇವತೆ ಎನಿಸಿದ ಜಟಿಗ ಕುರಿತ ಲೇಖನದಲ್ಲಿ ಜಟಿಗನ ಪರಿವಾರ, ಅದು ವೀರದೇವತೆ ಆದದ್ದು ಭೂತಾರಾಧನೆಗೂ ದೈವಾರಾದನೆಗೂ ಇರುವ ಸಂಬಂಧ ಸಂಸ್ಕೃತೀಕರಣಗೊಂಡ ರೀತಿಯನ್ನು ಚರ್ಚಿಸಲಾಗಿದೆ. ಜನಪದ ಸಾಹಿತ್ಯದಲ್ಲಿ ಪ್ರಾದೇಶಿಕ ವೈಶಿಷ್ಟ್ಯಗಳ ಪಾಠಾಂತರಗಳನ್ನು ಗುರುತಿಸಿ ಮೂಲ ಪಾಠದ ನಿಖರತೆಯನ್ನು ಪತ್ತೆ ಮಾಡುವಂತೆ ಜಾನಪದ ವಿಜ್ಞಾನಿ ಜಾನಪದ ಧರ್ಮ ದೇವರುಗಳಲ್ಲಿಯ ಪ್ರಾದೇಶಿಕ  ವೈಶಿಷ್ಟ್ಯ, ಪ್ರತಿಮೆಗಳ ರೂಪಾಂತರ ಧಾರ್ಮಿಕ ಸ್ಥಿತ್ಯಂತರಗಳನ್ನು ಗುರುತಿಸಿ ಅವುಗಳ ಮೂಲ ಅವಸ್ಥೆಯನ್ನು ಕಂಡುಹಿಡಿಯುವುದು ಅವಶ್ಯಕವಾಗಿದೆ. ಇಂಥ ಉದ್ದೇಶಗಳಿಗೆ ಪ್ರಸ್ತುತ ಬರಹ ಒತ್ತಾಸೆ ಆಗಬಲ್ಲದು. 
      ಕರಾವಳಿಯ ಪ್ರಾಣಿ ವಸತಿಯನ್ನು ಕುರಿತ ಬರಹವಾಗಿದ್ದರೂ ಕೃಷಿಯ ಕಲ್ಪನೆ -ಪ್ರಾಣಿ ಉಪಯೋಗದ ಬಗೆಗೂ ಸೂಕ್ತ ಮಾಹಿತಿ ನೀಡುತ್ತ ಪ್ರಾಣಿ ವಸತಿಯ ಪ್ರಾಚೀನ ಸ್ವರೂಪಗಳತ್ತ ಗಮನ ಸೆಳೆಯುತ್ತದೆ. ಕಟ್ಟಡ ಶೈಲಿ, ಕೊಟ್ಟಿಗೆ ರಚನೆಗಳು ಆರ್ಥಿಕ ಮೂಲವಾಗಿ ಕೆಲಸ ಮಾಡಿದ ರೀತಿ. ವಸತಿ ವ್ಯವಸ್ಥೆಯಲ್ಲಿ ಆದ ಸ್ಥಿತ್ಯಂತರಗಳನ್ನು ಇಲ್ಲಿ ದಾಖಲಿಸಲಾಗಿದೆ. ಕವಿರಾಜ ಮಾರ್ಗಕಾರ ಹೇಳುವ ನಾಡವರಿಗೂ ಉತ್ತರ-ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ನೆಲೆಸಿರುವ ನಾಡವರಿಗೂ ಸಂಬಂಧವಿದೆ ಎಂಬ ಪಂಡಿತರ ಪ್ರಸ್ತಾಪವನ್ನು ಕುರಿತಂತ `ನಾಡವರು' ಲೇಖನದಲ್ಲಿ ವಿವರಣೆ ಇದೆ. ಈ ಸಂಬಂಧದಲ್ಲಿ ಅಭಿಪ್ರಾಯ ಭೇದಗಳು ಮೂಡಬಹುದಾದರೂ ಉತ್ತರಕನ್ನಡದ ನಾಡವರ ಮೌಖಿಕ ಪರಂಪರೆ ತಿಳಿಸುವ ಅನುಭವ ಲೋಕದ ಮೂಲಕ ಅವರ ಪೂರ್ವದ ನೆಲೆಗಳನ್ನು ಶೋಧಿಸುವ ಪ್ರಯತ್ನವನ್ನು ಅಲ್ಲಗಳೆಯುವಂತಿಲ್ಲ. 
       ಉತ್ತರಕನ್ನಡ ಜಿಲ್ಲೆಯ ಸಮಗ್ರ ಬದುಕನ್ನು ಒಳಗೊಳ್ಳಬಹುದಾದ ಸಾಧ್ಯತೆಯಿಂದ ಹೊರತಾಗಿರುವ ಲೇಖನ ಎಂದರೆ `ಉತ್ತರಕನ್ನಡ ಜಿಲ್ಲೆಯ ಜನಪದ ಸಂಸ್ಕೃತಿ'. ಬದುಕಿನ ಒಂದೆರಡು ಎಳೆಗಳು ಮಾತ್ರ ಇಲ್ಲಿ ನುಸುಳಿರುವುದರಿಂದ ಲೇಖನಕ್ಕೆ ಸಮಗ್ರ ಸ್ವರೂಪ ದಕ್ಕಿಲ್ಲ. ಗಂಧದ ಕೆತ್ತನೆ, ಗಣಪತಿಯ ಕೆತ್ತನೆ, ಅಂತಹ ವಿಶಿಷ್ಟ ಕರಕುಶಲ ಕಲೆಗಳಿಗೆ ಹೆಸರಾದ ಉತ್ತರ ಕನ್ನಡ ಜಿಲ್ಲೆಯ ಪ್ರಾಚೀನ ಕರಕುಶಲ ಕಲೆಯ ವೈಶಿಷ್ಟ್ಯಗಳನ್ನು ಉದ್ಯೋಗ ಬದಲಾವಣೆಯ ಪ್ರಕ್ರಿಯೆಗಳ ಹಿನ್ನೆಯಲ್ಲಿ ನಿರೂಪಿಸಲಾಗಿದೆ. 
         ಹಾಗೆಯೇ `ರಂಗೋಲಿ' ಕಲೆಯಲ್ಲಿನ ಆಧುನಿಕ ಪ್ರಕ್ರಿಯೆಗಳನ್ನು ಆ ಸಂಬಂಧವಾದ ಬರಹದಲ್ಲಿ ಗುರುತಿಸಲಾಗಿದೆ. ಕಲೆಯನ್ನು ಅರಿಯಲು ಸಹಾಯವಾಗುವ ಚಾರಿತ್ರಿಕ ದಾಖಲೆಗಳನ್ನು ಒದಗಿಸುವಾಗ ಇತರ ಆಧಾರಗಳನ್ನು ನೀಡಲಾಗದಿದ್ದರೂ ಜನಪದ ಕಥೆ, ಹಾಡು, ಒಗಟು ಮತ್ತು ನಂಬಿಕೆಗಳಲ್ಲಿ ವ್ಯಕ್ತವಾಗುವ ರಂಗೋಲಿಯ ಮಹತ್ವವನ್ನು ಕುರಿತು ಇಲ್ಲಿ ದಾಖಲಿಸಬೇಕಿತ್ತು. ಹಾಗೆಯೇ ಆಧುನಿಕ ಭಾರತದ ಉದ್ದಗಲಕ್ಕೂ ರಂಗೋಲಿ ಹರಡಿಕೊಂಡಿದೆ. ಬುಡಕಟ್ಟುಗಳು, ಹಿಂದುಗಳು, ಜೈನರು ಪಾರ್ಸಿಗಳು ತಮ್ಮ ಪರಂಪರಾಗತ ಧರ್ಮಾಚರಣೆಗಳ ಒಂದು ಅಂಗವಾಗಿ ರಂಗೋಲಿಯನ್ನು ರಚಿಸುತ್ತಿದ್ದಾರೆ. ಇದಕ್ಕೆ ತಕ್ಕ ನಿದರ್ಶನಗಳನ್ನು ಕಲೆಯ ಸಾಂದರ್ಭಿಕ ಮಹತ್ವವನ್ನು ನಿರೂಪಿಸಿದ್ದರೆ. ಲೇಖನಕ್ಕೆ ಸಮಗ್ರ ಸ್ವರೂಪ ಸಿದ್ದಿಸುತ್ತಿತ್ತು. 

      ` ಸಮಾಜ ಶಾಸ್ತ್ರೀಯ ಅಧ್ಯಯನ ನೆಲೆಯ ಜನಪದ ಆಟಗಳು' ಮಾಸ್ತಿ ಜಟಿಗಗಳ ಮತಾಂತರ. ನಮ್ಮ ಆಹಾರ ಪಾನೀಯಗಳು `ನನ್ನಿ' ಈ ಲೇಖನಗಳೂ ಸಮೃದ್ಧ ಮಾಹಿತಿಗಳಿಂದ ಕೂಡಿದ್ದು ಹೊಸ ಒಳ ನೋಟಗಳಿಗೆ ದಾರಿ ಮಾಡಿಕೊಡುತ್ತದೆ. `ನನ್ನಿ ಶಬ್ದದ ಅರ್ಥ ಸಾಧ್ಯತೆಗಳನ್ನು ಕಂಡುಕೊಳ್ಳಲು ಶಾಂತಿ ನಾಯಕರು ಅನುಸರಿಸುವ ಸಂಶೋಧನೆಯ ಹಾದಿ ಕುತೂಹಲಕಾರಿ.
         ದೀಪಾವಳಿ ಜಟಗ ಮುಂತಾದ ಆಚರಣೆಗಳನ್ನು ವೃಕ್ಷಾರಾಧನೆಯ ನೆಲೆಯಲ್ಲಿ ನೋಡುವ ರೀತಿ. ಪ್ರಾಣಿ ವಸತಿ ವ್ಯವಸ್ಥೆ ಮತ್ತು ಕರಕುಶಲ ಕಲೆಗಳನ್ನು ಸಾಂಸ್ಕೃತಿಕ ಮತ್ತು ಆರ್ಥಿಕ ನೆಲೆಯಲ್ಲಿ ಮೌಲಿಕತೆಯನ್ನು ಗುರುತಿಸುವ ರೀತಿ ಗಮನಾರ್ಹ. ಮೌಲಿಕ ಪರಂಪರೆ ಮತ್ತು ಲಿಖಿತ  ಪರಂಪರೆಯ ಸಂಗತಿಗಳನ್ನು ಒಟ್ಟೊಟ್ಟಿಗೆ ತರುವುದರ ಮೂಲಕ ಶಾಂತಿ ನಾಯಕರು ತಮ್ಮ ಬರಹಗಳಿಗೆ ಅಧಿಕೃತತೆ ಉಂಟಾಗಲು ಕಾರಣರಾಗಿದ್ದಾರೆ. ಎಲ್ಲ ಸಂಗತಿಗಳನ್ನು ಆದಷ್ಟು ಪ್ರಸ್ತುತಗೊಳಿಸುತ್ತ ಸಾಗುವ `ಜಾನಪದ ಲೇಖನ ಸಂಚಯ' ಕರಾವಳಿ ಜಾನಪದ ಹಾಗೂ ಅಲ್ಲಿಯ ಸಾಮಾಜಿಕ ಉಪಭಾಷೆಯ ಬಗೆಗೆ ಅಧ್ಯಯನ ಮಾಡುವವರಿಗೆ ಉಪಯುಕ್ತ ಆಕರವಾಗಬಲ್ಲದು.



Sunday 16 September, 2012

ನಮ್ಮ ಗಿಡ ಮರ ಬಳ್ಳಿಗಳು-ಟೊಮೆಟೊ



ಟೊಮೆಟೊ  Solanum lycopersicum



      ಇಂದು ಭಾರತೀಯ ಅಡುಗೆಯಲ್ಲಿ ಹುಣಸೆ ಹಣ್ಣನ್ನು ಹಿಂದಕ್ಕೆ ಹಾಕಿ ತನ್ನ ಸ್ಥಾನವನ್ನು ಭದ್ರಪಡಿಸಿಕೊಂಡ ಟೊಮೆಟೊ ಮೂಲತಃ ಕಾಡಿನ ಬೆಳೆ. ಇದು ದಕ್ಷಿಣ ಅಮೇರಿಕಾ ಮೂಲದ್ದೆಂದು ತಿಳಿಯಲಾಗುತ್ತದೆ,
ಸ್ಪೆನಿಷ್ ವಸಾಹತು ಶಾಹಿಗಳಲ್ಲೊಬ್ಬರಾದ ಕಾರ್ಟೆಜ ಎಂಬುವವರು ತಮಗಾಗಿ ವಸಾಹತು ನೆಲೆಗಳ ಹುಡುಕಾಟದಲ್ಲಿದ್ದಾಗ ಈ ಹಣ್ಣನ್ನು ಅಲ್ಲಿ ಕಂಡರು. ಕೆಂಪು ಕೆಂಪಾದ ಈ ಹಣ್ಣು ತಿನ್ನಲು ಯೋಗ್ಯವಾದದ್ದೆಂದು ಅಲ್ಲಿಯ ಜನರಿಗೆ ಮೊದಲು ಗೊತ್ತಿರಲಿಲ್ಲ. ಅವರು ಇದನ್ನು ವಿಷದ ಹಣ್ಣು ಎಂದು ತಿಳಿದಿದ್ದರು.
    ಕಾರ್ಟೆಜ ಈ ಹಣ್ಣನ್ನು ಗಮನಿಸಿದರು. ಅದರ ಸುತ್ತಮುತ್ತಲ ಜೀವಿಗಳು ಹಕ್ಕಿಗಳು ಈ ಹಣ್ಣನ್ನು ತಿಂದು ಬದುಕುತ್ತಿರುವುದನ್ನು ಪ್ರತ್ಯಕ್ಷವಾಗಿ ಕಂಡುಕೊಂಡರು., ಅದನ್ನು ಈತ ನಾಯಿ, ಬೆಕ್ಕುಗಳಿಗೆ ಹಾಕಿದಾಗ ಈ ಹಣ್ಣನ್ನು ತಿಂದು ಅವು ಸುಖವಾಗಿದ್ದವು. ಬಳಿಕ ಅವರು ಹಾಗೂ ಅವರ ಸಹಚರರು ಅದನ್ನು ಮೆಲ್ಲುತ್ತ ಅದರ ಸವಿಯನ್ನು ಅನುಭವಿಸಿದರು, ಬಳಿಕ ಅಲ್ಲಿನ ಜನರಿಗೆ ಇದನ್ನು ಪರಿಚಯಿಸಿದರು.

       ಕಾರ್ಟೆಜ ಸ್ಪೆನಿಷ್ ವಸಾಹತುಗಳಲ್ಲಿ ಇದರ ಪ್ರಚಾರ ಮಾಡಿದರು. ಇದರಿಂದಾಗಿ 1521ರ ಸುಮಾರಿಗೆ ಯುರೋಪಕ್ಕೆ ಅಲ್ಲಿಂದ 1540 ಸುಮಾರಿಗೆ ಏಶಿಯಾ ಖಂಡಕ್ಕೆ ಬಂದ ಇದು ನಮ್ಮ ದೇಶದ ನಮ್ಮ ನಾಡಿನ ವಿಶಿಷ್ಟ ತರಕಾರಿಯಾಗಿ ನಮ್ಮ ನಡುವೆ ಇದೆ.

     ಇಂದು ಇದು ಇಡೀ ಜಗತ್ತಿಗೆ ಪರಿಚಿತವಾಗಿದೆ. ಜಗತ್ತಿನಲ್ಲಿ ಸುಮಾರು 7500 ಬಗೆಯ ಟೊಮೆಟೊ ತಳಿಗಳಿದ್ದು  ಕಾಮನ ಬಿಲ್ಲಿನಲ್ಲಿರುವ ಎಲ್ಲ ಬಣ್ಣಗಳಲ್ಲಿ ಇವು ಕಂಡುಬರುತ್ತವೆ.  ( ಕರ್ನಾಟಕದಲ್ಲಿ ಬಳ್ಳಿ ಟೊಮೆಟೊ ತಳಿಯಿದೆ; ಇದು ದೇಸಿಯಾಗಿರಬಹುದು) ನಮ್ಮ ದೇಶದಲ್ಲಿ ಬೆಳೆಯುವ ಟೊಮೆಟೊಗಳು ಸುಂದರ ಕೆಂಪು  ಬಣ್ಣದಿಂದ ಕಂಗೊಳಿಸುತ್ತವೆ. 

     ಟೊಮೆಟೋ ಇಂದು ಕೇವಲ ತರಕಾರಿಯಾಗಿ ಉಳಿದಿಲ್ಲ. ಅದು ಶ್ರೇಷ್ಟ ಮಟ್ಟದ ಔಷಧವಾಗಿ ತನ್ನ ಗುಣವನ್ನು ತೋರಿಸಿ ಕೊಟ್ಟಿದೆ. ಅದ್ದರಿಂದ ಇದನ್ನು ತರಕಾರಿಯಂತೆಯಲ್ಲದೆ ನಾವು ತಿನ್ನುವ ಹಣ್ಣುಗಳ ಗುಂಪಿನಲ್ಲಿ ಸೇರಿಸಿಕೊಂಡು ಗೌರವದೊಂದಿಗೆ ಇತರ  ಹಣ್ಣುಗಳಂತೆ ಇದನ್ನು ಮೆಲ್ಲುವ ಯೋಗ್ಯ ಕಾಲ ಒದಗಿ ಬಂದಿದೆ. 
 
ಸುಲಭ ಬೆಲೆಗೆ ಸಿಗುವ ಟೊಮೆಟೋ ಹಣ್ಣು ಕ್ಯಾನ್ಸರಿನಂತಹ ಭಯಾನಕ ರೋಗ ನಿರೋಧಕವಾಗಿದೆ. ಸ್ತನ ಕ್ಯಾನ್ಸರನ್ನು ತಡೆಯ ಬಲ್ಲದು. ಇದರಲ್ಲಿ ಕ್ಯಾನ್ಸರ ನಿರೋಧಕವಾದ ಎಂಟಿ ಒಕ್ಸಿಡೆಂಟ್ ಲಿಕೋಪಿನ ಎಂಬ ಅಂಶ ಹೆಚ್ಚಿದೆ. ಇದು ಈ ತರಕಾರಿಗೆ ಆಕರ್ಷಕ ಕೆಂಪು ಬಣ್ಣವನ್ನು ನೀಡಿದೆ.
ಇದು ಬೊಜ್ಜು ನಿರೋಧಕ. ಪ್ರತಿ ಮುಂಜಾನೆ ಉಪಹಾರಕ್ಕಿಂತ ಮುಂಚೆ ಒಂದೆರಡು ಟೊಮೊಟೋ ತಿಂದು ಬೊಜ್ಜನ್ನು ಇಳಿಸಿಕೊಳ್ಳಬಹುದು. ಹಣ್ಣು ಹೃದಯವನ್ನು ಲಿವರನ್ನು ಉತ್ತಮ ಸ್ಥಿತಿಯಲ್ಲಿಡುತ್ತದೆ. ಸೂರ್ಯ  ಕಿರಣಗಳಿಂದಾಗುವ ಚರ್ಮದ ತೊಂದರೆಗಳನ್ನು ನೀಗುತ್ತದೆ
       
ಇದರಲ್ಲಿ  ಕ್ಯಾಲ್ಸಿಯಂ, ಪೊಟ್ಯಾಸಿಯಂ, ಮೆಗ್ನೇಸಿಯಂ ಮುಂತಾದ ಲವಣಗಳಿವೆ. ಬಿ. 1, ಬಿ. 2, ಮತ್ತು ಸಿ. ಎ ಮಿಟಾಮಿನಗಳಿವೆ..
ಟೊಮೆಟೋ ರಸ ಹೊಟ್ಟೆಯನ್ನು ಸ್ವಚ್ಛಮಾಡುತ್ತದೆ. ಇದು ಅಜೀರ್ಣ, ವಾಯು, ಮಲಬದ್ಧತೆ ನಿವಾರಕ. ಟೊಮೆಟೊದಲ್ಲಿರುವ ಕಬ್ಬಿಣ ಸುಲಭ ಪಚನಕಾರಿ, ಆದ್ದರಿಂದ ರಕ್ತಹೀನತೆಯಿದ್ದವರು ಟೊಮೆಟೋ ತಿನ್ನಬೇಕು. ಮಕ್ಕಳಿಗೆ ಕಿತ್ತಳೆ ರಸಕ್ಕಿಂತ ಟೊಮೆಟೋ ರಸ ಉತ್ತಮ. ಟೊಮೆಟೋ ರಸಕ್ಕೆ ಬೆಲ್ಲ, ಕಲ್ಲು,ಸಕ್ಕರೆ,ಜೇನು, ಖರ್ಜೂರ ರಸಗಳಲ್ಲೊಂದನ್ನು ಸೇರಿಸಬೇಕು. ಸಾಮಾನ್ಯ ಜ್ವರವಿದ್ದಾಗ ಟೊಮೆಟೋ ಜ್ಯೂಸ ಸಾರುಗಳನ್ನು ಆಹಾರವಾಗಿ ಕೊಡಬಹುದು. ಕಣ್ಣಿನ ತೊಂದರೆಗೆ ಟೊಮೆಟೋ ರಸ ಸೇವಿಸಬೇಕು. ಇದನ್ನು ಹಸಿಯಾಗಿ ತಿನ್ನುವುದು ಯೋಗ್ಯ. ಊಟದ ಹೊತ್ತಿಗೆ ಸವತೆ, ಗಜರಿ, ಉಳ್ಳಾಗಡ್ಡೆಗಳ ತಾಳೆಗಳ ಜೊತೆ ಟೊಮೆಟೋ ತಾಳೆಗಳನ್ನು ಇಟ್ಟು ಅಲಂಕರಿಸಲಾಗುತ್ತದೆ. ಟೊಮೆಟೋ ಗೊಜ್ಜು, ಕೋಸಂಬರಿ ಸಾರುಗಳು ಅಡುಗೆ ಮನೆಯಲ್ಲಿ ತಯಾರಾಗುತ್ತವೆ. ಟೊಮೆಟೋ ಕೆಚಪ್ಪು,  ಟೊಮೆಟೋ ಜಾಮುಗಳನ್ನು ಮನೆಯಲ್ಲಿ ಮಕ್ಕಳೂ ಸಿದ್ಧಪಡಿಸಿ ತಿನ್ನಬಹುದು. ಚಿಪ್ಪಿಕಲ್ಲು ಶೆಟ್ಲಿ ಸಾರುಗಳಿಗೆ  ಟೊಮೆಟೊ ಹಣ್ಣಿನ ಬೆರಕೆ ಮಹತ್ತರ ರುಚಿ ಕೊಡುತ್ತದೆ. ಹೀಗೆ ನಮ್ಮ ನಾಡಿನಲ್ಲಿ ಟೊಮೆಟೊ ಹಣ್ಣಿನಿಂದ ನೂರಾರು ರೀತಿಯಲ್ಲಿ ಅಡುಗೆ ತಯಾರಿಸಲಾಗುತ್ತದೆ.  

  ಇಂತಹ ಅಪೂರ್ವ ಟೊಮೆಟೊ ಗಿಡವನ್ನು ಮಕ್ಕಳೂ  ಬೆಳೆಯಬಹುದು. ಶಾಲೆಯಲ್ಲಿ ಶಿಕ್ಷಕರು ಪ್ರತಿ ಮಕ್ಕಳಿಗೊಂದರಂತೆ ಗಿಡ ನೆಡಿಸಿ ಪ್ರತಿ ಗಿಡಕ್ಕೆ ಉದ್ದ ನುಕ್ಕಿ ಕೋಲು ನೆಟ್ಟು ಗೇಣೆತ್ತರದ ರಟ್ಟಿನ ಬೋರ್ಡ ತೂಗಿಸಿ ಅದರ ಮೇಲೆ ಅವರವರ ಹೆಸರು ಬರೆಯಿಸಿ ಈ ಗಿಡ ಬೆಳೆಯಲು ಪ್ರೇರಣೆ ನೀಡಿ ಜಗತ್ತಿಗೆ ಮಾದರಿಯಾಗಬಾರದೆ?. ಒಂದು ಮಾತನ್ನು ಗಮನಿಸಿರಿ. ಟೊಮೆಟೊ ಗಿಡದ ಎಲೆದಂಟುಗಳು ಮನುಷ್ಯರಿಗೆ, ಪ್ರಾಣಿಗಳಿಗೆ ಸೇವನೆಗೆ ಯೋಗ್ಯವಲ್ಲ 

Friday 7 September, 2012

ನಮ್ಮಗಿಡ ಮರ ಬಳ್ಳಿಗಳು-ಮೆಹಂದಿ


ಮದರಂಗಿ ಮೇಹಂದಿ
Lawsonia inermis,Linn.Lythraceae   

ಮದರಂಗಿ ಇದರ ತವರು ಅರಬ್ ಮತ್ತು ಪರ್ಸಿಯಾ ದೇಶವೆಂಬ ಅಭಿಪ್ರಾಯಗಳಿವೆ. ಇದರ ಬಳಕೆ ಉತ್ತರ ಭಾರತದಲ್ಲಿ ಹೆಚ್ಚು ರೂಢಿಯಲ್ಲಿದೆ. ಇದು ದಕ್ಷಿಣ ಭಾರತದಲ್ಲಿಯೂ ಜನಪ್ರಿಯವಾಗುತ್ತಿದೆ. ಇದಕ್ಕೆ ಕನ್ನಡದಲ್ಲಿ ಗೋರಂಟಿ ಎಂಬ ಹೆಸರಿರುವದಾದರೂ ಇದರ ಮದರಂಗಿ, ಮೆಹಂದಿ ಎಂಬ ಹೆಸರುಗಳು ಹೆಚ್ಚು ಜನಪ್ರಿಯವಾಗಿವೆ. ಇಂಗ್ಲಿಷಿನ ಹೆನ್ನಾ ಎಂಬ ಹೆಸರೂ ಇಲ್ಲಿ ಬಳಕೆಯಲ್ಲಿದೆ. ಸಸ್ಯ ಶಾಸ್ತ್ರಜ್ಞರು ಇದನ್ನು ಲೊಸೊನಿಯ ಇನೆರ್ಮಸ್  ಎನ್ನುತ್ತಾರೆ.


    ಈ ಗಿಡವು ತೀರ ಎತ್ತರಕ್ಕೆ ಬೆಳೆಯದೆ ಹಿಂಡಾಗಿ ಪಸರಿಸುತ್ತದೆ. ಇದನ್ನು ಸುತ್ತ ಕತ್ತರಿಸಿ ನಮಗೆ ಇಷ್ಟವಾಗುವ ಆಕಾರ ಕೊಟ್ಟು ಬೆಳಸಬಹುದು. ಈ ಗಿಡದ ಎಲೆಗಳು ಹುಣಸೆ ಎಲೆಗಿಂತ ತುಸು ದೊಡ್ಡವು. ಅಂಚು ಬೋಳಾಗಿರುತ್ತದೆ. ಎಲೆ ಎದುರು ಬದುರಾಗಿರುತ್ತವೆ. ಬಿಳಿ ಮತ್ತು .ತುಸು ಗುಲಾಬಿ ಬಣ್ಣದ ಹೂಗಳು ದೊಡ್ಡ ದೊಡ್ಡ  ಗೊಂಚಲುಗಳಲ್ಲಿ ನೂರಾರು ಸಂಖ್ಯೆಯಲ್ಲಿರುತ್ತದೆ. ಕಾಯಿ, ಹಣ್ಣುಗಳು ಬೋಳಾಗಿದ್ದು ವಾಯು ವಿಳಂಗದ ಫಲವನ್ನು ಹೋಲುತ್ತವೆ. ಫಲದಲ್ಲಿ ಬಹುಬೀಜಗಳಿರುತ್ತವೆ. ಮೇಹಂದಿ ಎಲೆ ದೇಹದ ಬಾಹ್ಯ ಶೃಂಗಾರಕ್ಕೆ ಬಣ್ಣ ನೀಡುತ್ತದೆ. ಮಹಿಳೆಯರು ಇದರ ಎಲೆಯನ್ನು ದೇಹಾಲಂಕಾರದ ನಕ್ಷೆಯ ಬಣ್ಣಕ್ಕಾಗಿ ಬಳಸುವದು ಪ್ರಾಚೀನ ಕಾಲದಿಂದಲೂ ನಡೆದು ಬಂದ ಪದ್ಧತಿ. ಹಸಿ ಬೀಜ ಬಿತ್ತಿ ಅಥವಾ ಟೊಂಗೆ ನೆಟ್ಟು ಗಿಡವನ್ನು ಬೆಳೆಸಿಕೊಳ್ಳಬಹುದು.

   ಎಲೆಯನ್ನು ಅರೆದು ಉಗುರು ಹಸ್ತ ಪಾದಗಳಿಗೆ ಹಚ್ಚುತ್ತಾರೆ. ಮೆಹಂದಿ ಎಲೆಯ ಕಲಕಕ್ಕೆ ಲಿಂಬು ರಸ ಚಹದ ಅರ್ಕ ಸೇರಿಸಿ ನಾಲ್ಕಾರು ತಾಸಿನ ಬಳಿಕ ಮೈಗೆ ಉಗುರಿಗೆ ಹಚ್ಚಿಕೊಂಡರೆ ಬಣ್ಣ ಚೆನ್ನಾಗಿ ಮೂಡುತ್ತದೆ. ಮೇಹಂದಿ ಪುಡಿ ಪೇಸ್ಟಗಳಲ್ಲಿಯೂ ಕೃತ್ರಿಮ ರಾಸಾಯನಿಕ ದ್ರವ್ಯಗಳ ಬಳಕೆಯಾಗತೊಡಗಿದೆ. ಆದ್ದರಿಂದ ಮನೆಯಲ್ಲಿ ನೈಸರ್ಗಿಕವಾಗಿ ರೀತಿಯಲ್ಲಿ ತಯಾರಿಸಿದ ಕಲಕವನ್ನು ಬಳಸುವದು ಉತ್ತಮ.
 
ಮೆಹಂದಿಯು ಬಾಹ್ಯ ಅಲಂಕಾರವನ್ನು ಹೆಚ್ಚಿಸುತ್ತದೆಯೆಂದು  ಬಹುಜನರಿಗೆ ಗೊತ್ತು. ಆದರೆ ನಮ್ಮ ಶರೀರಕ್ಕೆ ಆತಂರಿಕವಾಗಿ ಸೌಂದರ್ಯ ನೀಡುವ ಅಂದರೆ ಆರೋಗ್ಯವನ್ನು ಹೆಚ್ಚಿಸುವ ಬಹುದೊಡ್ಡ ಗುಣವನ್ನು ಇದು ಹೊಂದಿದೆ ಎಂಬುದು ಬಹು ಜನರಿಗೆ ಗೊತ್ತಿಲ್ಲ.
 
ಈ ಎಲೆಯನ್ನು ಬಳಸಿ ಬಹಳ ಸುಲಭವಾಗಿ ಸ್ನಾನದ ಪುಡಿಯನ್ನು ತಯಾರಿಸಿಕೊಳ್ಳಬಹುದಾಗಿದೆ. ನೆರಳಿನಲ್ಲಿ ಒಣಗಿಸಿದ ಮೇಹಂದಿ ಎಲೆ ಅಳಲೆ ಕಾಯಿಯ ಸಿಪ್ಪೆಯ ಪುಡಿ, ನೆರಳಲ್ಲಿ ಒಣಗಿಸಿದ ಬೇವಿನೆಲೆ, ಮಾವಿನೆಲೆ ಹಾಗೂ ದಾಳಿಂಬ ಮೊಗ್ಗುಗಳು ಇವನೆಲ್ಲ ಕೂಡಿಸಿ, ಕುಟ್ಟಿ ವಸ್ತ್ರ ಗಾಳಿತ ಮಾಡಿಕೊಳ್ಳಿ, ಸ್ನಾನಕ್ಕೆ ಸಬಕಾರ ಬದಲು ಬಳಸಿರಿ. ಇದಕ್ಕೆ ತುಸು ಅಟ್ಟಲಕಾಯಿ ಮತ್ತು ಸೀಗೆಕಾಯಿ ಪುಡಿ ಸೇರಿಸಬಹುದು.
 
ಬಿಸಿಲಿನಲ್ಲಿ ತಿರುಗಾಡುವದರಿಂದ ಬರುವ ತಲೆನೋವಿಗೆ ಹಾಗೂ ಉತ್ತಮ ನಿದ್ದೆಗೆ ಒಂದು ಹಿಡಿ ಮೇಹಂದಿ ಹೂವನ್ನು ತೊಳೆದು ರಾತ್ರಿ ಒಂದು ಗ್ಲಾಸು ಬಿಸಿ ನೀರಿನಲ್ಲಿ ಹಾಕಿ ಮುಚ್ಚಿಡಿ. ಪ್ರತಿದಿನ ಮುಂಜಾನೆ ಇದನ್ನು ಸೋಸಿ ಕುಡಿಯಿರಿ. ಈ ಚಹಕ್ಕೆ ಒಂದು ಚಮಚ ಜೇನು ಅಥವಾ ಬೆಲ್ಲ ಸೇರಿಸಬಹುದು. ಜ್ವರದ ನೀರಡಿಕೆಗೂ ಇದು ಮದ್ದು. ಒಂದು ಹಿಡಿ ಹೂವನ್ನು ನೀರಿನಲ್ಲಿ ಅರೆದು ತಲೆಗೆ ಹಾಗೂ ಕುತ್ತಿಗೆ ಸುತ್ತ ಲೇಪಿಸಿರಿ ಬಿಸಿಲಿನ ತಲೆನೋವು ದೂರ.
 
ಒಂದು ಹಿಡಿ ಹೂವನ್ನು ನೀರಿನಲ್ಲಿ ಅರೆದು ಸೋಸಿ ಕಲ್ಲುಸಕ್ಕರೆ ಸೇರಿಸಿ ಅನೇಕ ದಿನ ಕುಡಿಯಿರಿ. ದೇಹಕ್ಕೆ ತಂಪೆ ಎನಿಸುತ್ತದೆ. ಹೂವನ್ನು ತಂಪಿನಲ್ಲಿ ಒಣಗಿಸಿಟ್ಟುಕೊಳ್ಳಿರಿ.
ಒಂದು ಚಮಚ ಮೇಹಂದಿ ಬೀಜದ ಪುಡಿಗೆ 1 ಚ. ಬೆಲ್ಲ ಅಥವಾ ಜೇನು ಸೇರಿಸಿ ಕುಡಿದರೆ ತಲೆನೋವು ದೂರವಾಗುತ್ತದೆ. ಒಣ ಅಥವಾ ಹಸಿ ಎಲೆಯನ್ನು ನೀರಿನಲ್ಲಿ ಕುದಿಸಿ ನೀರನ್ನು ಅರ್ಧಕ್ಕಿಳಿಸಿರಿ, ಸೋಸಿದ ಈ ನೀರಿನಿಂದ ಅನೇಕ ಬಾರಿ ಬಾಯಿ ಮುಕ್ಕಳಿಸಿದರೆ ಬಾಯಿಯ ದುರ್ಗಂಧ ಮತ್ತು ಹುಣ್ಣು ಗುಣವಾಗುತ್ತದೆ. ಒಂದರಿಂದ ಎರಡು ಚಮಚ ಎಲೆಯ ರಸವನ್ನು ದಿನಕ್ಕೆ ಮೂರು ನಾಲ್ಕು ಬಾರಿ ಹಾಲಿನ ಜೊತೆ ಸೇವಿಸಿದರೆ ಅಶಕ್ತತೆಯ ತಲೆ ನೋವು ದೂರವಾಗುತ್ತದೆ. ಒಂದು ಕಪ್ಪು ಅಂದರೆ 100ಗ್ರಾಂ ಎಣ್ಣೆಗೆ ಒಂದೂವರೆ ಹಿಡಿ ಎಲೆ ಹಾಕಿ ಸಣ್ಣ ಉರಿಯಲ್ಲಿ ಬೇಯಿಸಿರಿ. ಬೇಯುವ ಸಪ್ಪಳ ನಿಂತು ಎಲೆಗಳು ಗರಗರಿಯಾದಾಗ ಇಳಿಸಿರಿ. ಸೋಸಿ ಅಥವಾ ಸೋಸದೆ ಬಾಟ್ಲಿಯಲ್ಲಿ ತುಂಬಿಡಿರಿ. ಪ್ರತಿದಿನ ತಲೆಗೆ ಹಾಕಿ ತಲೆ ತಿಕ್ಕಿರಿ. ತಲೆ ನೋವು ದೂರ, ಕೂದಲು ಆರೋಗ್ಯಕರ.

  ಮೇಹಂದಿ ಎಲೆ, ಲಿಂಬು, ಚಹದ ಅರ್ಕ ಕೂಡಿಸಿ ಅರೆದು ತಲೆಗೆ ಹಚ್ಚಿ, ಮೂರು ತಾಸಿನ ಬಳಿಕ ತೊಳೆಯಿರಿ. ಕೂದಲ ಬಿಳಿ ಬಣ್ಣ ಬದಲಾಗುತ್ತದೆ. ಕರಿ ಕೂದಲು ಆರೋಗ್ಯವನ್ನು ಪಡೆಯುತ್ತದೆ, ಉದ್ದವನ್ನು ಹೆಚ್ಚಿಸಿಕೊಳ್ಳುತ್ತದೆ.

ಎಲೆಯನ್ನು ಹೆಚ್ಚು ನೀರು ಸೇರಿಸದೆ ಗಟ್ಟಿಯಾಗಿ ಅರೆದು ಅದನ್ನು ತೊಳೆಗಳಾಗಿ ತಟ್ಟಿ ಮುಚ್ಚಿದ ಕಣ್ಣಿನ ಮೇಲಿಟ್ಟು ಪಟ್ಟಿ  ಕಟ್ಟಿ ಮಲಗಿದರೆ ಕಣ್ಣು ಕೆಂಪಾಗುವದು ದೂರವಾಗುತ್ತದೆ.
 
ಕಾಮಾಲೆಯಲ್ಲಿ ಮುನ್ನಾ ದಿನ ಮಣ್ಣಿನ ಮಡಕೆಯಲ್ಲಿ ತಯಾರಿಸಿಟ್ಟ ಎಲೆಯ ಅರ್ಕವನ್ನು ಕುಡಿಯಿರಿ
ಮುಂಜಾನೆ ಯವಕ್ಷಾರ ಎರಡು ಗ್ರಾಂ ತಿಂದು ಬಳಿಕ ಮಣ್ಣಿನ ಮಡಕೆಯಲ್ಲಿ ತಯಾರಿಸಿಟ್ಟ ಎಲೆಯ ಅರ್ಕವನ್ನು ಅನೇಕ  ದಿನ ಕುಡಿಯಿರಿ. ಮೂತ್ರದ ಕಲ್ಲು ಹೊರ ಬರುತ್ತದೆ.
 
ಮನೆಯ ಮುಂದೆ ಒಂದು ಮೇಹಂದಿ ಗಿಡವಿದ್ದರೆ ಅದೆಷ್ಟು ಉಪಯುಕ್ತವೆಂಬುದನ್ನು ಅರಿತಿರಲ್ಲವೇ?








 





ನಮ್ಮಗಿಡ ಮರಬಳ್ಳಿಗಳು- ನಿತ್ಯಪುಷ್ಪ


ನಿತ್ಯಪುಷ್ಪ  Catharanthus roseus[L]G.Don


ಇದಕ್ಕೆ ಅಂಕೋಲೆಯ ಪ್ರಾದೇಶಿಕ ಮಾತಿನಲ್ಲಿ ಇಸಪತ್ರೆ, ಹೊನ್ನಾವರದ ಸುಶಿಕ್ಷಿತರಲ್ಲಿ ನಿತ್ಯಪುಷ್ಪ ಇತರ ಕಡೆಗಳಲ್ಲಿ ಕಾಶಿ ಕಣಗಿಲೆ .ಕೊಂಕಣಿ ಭಾಷೆಯಲ್ಲಿ ಸದಾಪುಲ ಎಂದು ಗುರುತಿಸಲಾಗುವ ಈ ಗಿಡವನ್ನು ಇಂಗ್ಲೀಷ ಭಾಷೆಯಲ್ಲಿ ಮದಾಗಾಸ್ಕರ ಪೆರಿವಿಂಕಲ್ ಎಂದೂ, ಜಗತ್ತಿನ ಸಸ್ಯವಿಜ್ಞಾನಿಗಳು ಕೆಥರಾಂಥಸ್ ರೋಸೆಸ್ ಎಂದು ಗುರುತಿಸುತ್ತಾರೆ. ಇದು ಅಪೊಸೈನೇಸಿ ಕುಟುಂಬಕ್ಕೆ ಸೇರಿದೆ.
   
    ಸುಮಾರು ಎರಡು ಮೂರು ಅಡಿ ಎತ್ತರವಾಗಿ ಹೆಚ್ಚು ಕವಲೊಡೆದು ಪೊದೆಯಂತೆ ಬೆಳೆಯುವ ದಟ್ಟ ಹಸುರಾದ ಎಲೆಗಳ ಸುಂದರ ದಟ್ಟ ಹಸುರು ಬಣ್ಣದ ಗಿಡವಿದು. ಎಲೆಗಳ ತುದಿಗಳು ಮೊಂಡವಾಗಿದ್ದು ಎಲೆಗಳಿಗೆ ಎದುರು ಬದುರು ಜೋಡಣೆಯಿದೆ. ಸುಂದರ ಬಿಳಿ, ಕೆಂಪು, ಗುಲಾಬಿ ಬಣ್ಣದ ಎಸಳುಗಳುಳ್ಳ ಹಾಗೂ ನಟ್ಟ ನಡುವೆ ಕೆಂಪು, ಬಿಳಿ, ಗುಲಾಬಿ ಬಣ್ಣದ ಚಿಕ್ಕ ಬೊಟ್ಟುಗಳುಳ್ಳ ಹೂವುಗಳ ಈ ಚಿಕ್ಕ ಗಿಡಗಳು ಗಮನ ಸೆಳೆಯುತ್ತವೆ. ಹೂಗಳು ಉದುರಿದ ಬಳಿಕ ಹೂ ತೊಟ್ಟಿನಷ್ಟು ಉದ್ದದ ಸೊಡಗೆಗಳು ಎಲೆಗಳ ಕಂಕುಳಲ್ಲಿ ಕಾಣಿಸುತ್ತವೆ. ಬೀಜಗಳು ಹೆಚ್ಚುಕಾಲ ಬದುಕಲಾರವು. ಆದಷ್ಟು ಬೇಗ ಬೀಜ ಬಿತ್ತಿ ಗಿಡ ಪಡೆಯಬೇಕು. ಕಸಿ ಕಟ್ಟಿ ಒಂದೇ ಗಿಡದಲ್ಲಿ ಹಲವು ಬಣ್ಣದ ಹೂ ಪಡೆಯಬಹುದು. ಮಳೆಗಾಲದಲ್ಲಿ ಮತ್ತು ಚೆನ್ನಾಗಿ ನೀರು ಬೀಳುವಲ್ಲಿ ಇದರ ಟೊಂಗೆಗಳೂ ಬೇರು ಬಿಡಬಲ್ಲವು. ಟೊಂಗೆಗಳನ್ನು ನೆಟ್ಟು ಹೊಸಗಿಡ ಪಡೆಯಬಹುದು
 
ಇದು ಅಂಗಳದ ಬದಿಯ ಅಲಂಕಾರದ ಗಿಡವಷ್ಟೇ ಅಲ್ಲ. ಇದು ಜಗತ್ತಿನ ಹಲವು ದೇಶಗಳು ಬಲ್ಲ ಅತ್ಯುತ್ತಮ ಔಷಧ ಗಿಡವಾಗಿದೆ. ಆಧುನಿಕ ಸಂಶೋಧನೆಗಳು ಇದರ ಅದ್ಭುತ ಔಷಧ ಗುಣವನ್ನು ಒಪ್ಪಿಕೊಳ್ಳುವ ಬಹುಕಾಲ ಮೊದಲೇ ಜಗತ್ತಿನ ಬಹು ದೇಶಗಳು ಇದನ್ನು ಮನೆಮದ್ದಿನಲ್ಲಿ ಬಳಸುತ್ತಿದ್ದವು.

    ಭಾರತದಲ್ಲಿ ಹಾಗೂ ಬೇರೆ ಬೇರೆ ದೇಶಗಳಲ್ಲಿ ಇದರ ಎಲೆಗಳನ್ನು ಸಿಹಿ ಮೂತ್ರ ರೋಗಕ್ಕೆ ಔಷಧವಾಗಿ ಬಳಸುತ್ತಿದ್ದಾರೆ. ಬಿಳಿಹೂವಿನ ಗಿಡವು ಔಷಧಕ್ಕೆ ಹೆಚ್ಚು ಉಪಯುಕ್ತವೆಂದು ತಿಳಿಯಲಾಗುತ್ತದೆಯಾದರೂ ಇದರ ಇತರ ಬಣ್ಣದ ಹೂವಿನ ಗಿಡಗಳು ಇದರಷ್ಟೇ ಔಷಧ ಗುಣವನ್ನು ಹೊಂದಿವೆಯೆಂಬ ಅಭಿಪ್ರಾಯಗಳಿವೆ. 

ಕ್ರಿಮಿ ಕೀಟಗಳು ಹಾಗೂ ಮಳೆಗಾಲದಲ್ಲಿ ತೊಂದರೆ ಕೊಡುವ ಹುಳಹುಪ್ಪಡಿಗಳು ಕಚ್ಚಿದ ಜಾಗದಲ್ಲಿ ಇದರ ಎಲೆಯನ್ನು ಅರೆದು ಅಲ್ಲಿ ಲೇಪಿಸಿದರೆ ಬೀಗು, ನೋವು ಕಡಿಮೆಯಾಗುತ್ತದೆ. 
 
ಪ್ರತಿ ತಿಂಗಳು ಅಧಿಕ ರಕ್ತಸ್ರಾವವಾಗುವ ಮಹಿಳೆಯರಿಗೆ ಎಲೆಯ ಕಷಾಯ ಕುಡಿಯುವುದರಿಂದ ಲಾಭವಿದೆ. ಸಿಹಿಮೂತ್ರ ರೋಗಿಗಳು ಪ್ರತಿ ದಿನ ನಾಲ್ಕಾರು ಎಲೆಗಳನ್ನು ಜಗಿದು ಅಥವಾ ಕಷಾಯ ಮಾಡಿ  ಸೇವಿಸಬಹುದಾಗಿದೆ. ಅಧಿಕ ರಕ್ತದೊತ್ತಡದವರಿಗೆ ಎಲೆಯ ಕಷಾಯ ಉತ್ತಮ. ರಕ್ತ ಕ್ಯಾನ್ಸರ್ ರೋಗವನ್ನೂ ಇದು ಹಿಡಿತಕ್ಕೆ ತರಬಲ್ಲದೆಂದು ತಿಳಿದುಬಂದಿದೆ.  ಬಸುರಿಯರು ಬಳಸದಿರುವದು ಉತ್ತಮ .ಮನೆಮದ್ದಿನ ಎಲ್ಲ ಸಂದರ್ಭಗಳಲ್ಲಿ ಎಲೆಗಳ ಬಳಕೆ ಸಾಕು.ಪ್ರಾಣಿಗಳು ಈ ಗಿಡಗಳನ್ನು ತಿನ್ನುವದಿಲ್ಲ ಆದ್ದರಿಂದ ಬೇಲಿಯ ಹೊರಗೂ ಇದನ್ನು ಬೆಳೆಸಬಹುದು.                          

ನಮ್ಮ ಗಿಡ ಮರ ಬಳ್ಳಿಗಳು-ಕುಸುಮಾಲೆ


ಕುಸುಮಾಲೆ,  Ixora coccinea  L    


.        ಇದಕ್ಕೆ ಕನ್ನಡದಲ್ಲಿ ಕಿಸ್ಗಾರ ಕೇಪುಳ ಹೊಳೆ ದಾಸವಾಳ ಗುಡ್ಡೆ ದಾಸವಾಳ ಇತ್ಯಾದಿ ಹೆಸರುಗಳಿವೆ.ಇದನ್ನು ಸಂಸ್ಕೃತದಲ್ಲಿ ಬಂಧು ಜೀವಕವೆನ್ನುತ್ತಾರೆ. ಇಕ್ಸೋರಾ ಕಾಕ್ಸೀನಿಯಾ ಇದು ಇದರ ವೈಜ್ಞಾನಿಕ ಹೆಸರು. ಕೆಂಪು ಹೂ ಬಿಡುವ ಕುಸುಮಾಲೆ ಗಿಡವು ನಮ್ಮ ದೇಶದ ಗುಡ್ಡ ಬೆಟ್ಟಗಳಲ್ಲಿ ಪ್ರಾಕೃತಿಕವಾಗಿ ಬೆಳೆಯುತ್ತದೆ. ಮನೆಮದ್ದಿನಲ್ಲಿ ಬಳಸುವದಕ್ಕಾಗಿ ಬಿಳಿ ಹೂ ಬಿಡುವ ಕುಸುಮಾಲೆ ಗಿಡವನ್ನು ಇಲ್ಲಿಯ ಜನರು ತಮ್ಮ ಮನೆಯ ಅಂಗಳದಂಚಿನಲ್ಲಿ ನೆಟ್ಟುಕೊಳ್ಳುತ್ತಾರೆ. ಕೆಂಪು ಹೂ ಬಿಡುವ ಕುಸುಮಾಲೆ ಗಿಡದ ಸೊಪ್ಪನ್ನು ಗೊಬ್ಬರಕ್ಕೆ ಬಳಸುವ ಕಾರಣ ಈ ಗಿಡಗಳು ಸೊಪ್ಪು ಕೊಯ್ಯುವವರ ಕತ್ತಿಗೆ ಪ್ರತಿವರ್ಷ ಬಲಿಯಾಗುತ್ತವೆ. ಆದ್ದರಿಂದ ಈ ಗಿಡಗಳು ಕುರುಚಲು ಗಿಡಗಳಾಗಿ ಬೆಳೆಯುತ್ತವೆ. ಕಡಿಯದೆ ಕೊಯ್ಯದೆ ಬಿಟ್ಟರೆ ಇವು ಸುಮಾರು ಎರಡಾಳೆತ್ತರದ ಚಿಕ್ಕ ಮರಗಳಾಗಿ ಬೆಳೆಯಬಲ್ಲವು.

        ಕೆಂಪನೆಯ ನಾಲ್ಕು ದಳದ ಹೂವುಗಳಿಗೆ ಉದ್ದದೇಟು. ಹವಳದ ಬಣ್ಣದ ಹವಳದಾಕಾರದ ಇದರ ಹಣ್ಣುಗಳು ಸಿಹಿ
ಹಾಗೂ ಚೊಗರು ರುಚಿಯುಳ್ಳವು. ಬೆಟ್ಟದ ಬದಿಯ ಹಳ್ಳಿ ಮಕ್ಕಳು ಇದರ ಹಣ್ಣುಗಳನ್ನು ತಿನ್ನುತ್ತಾರೆ. ಈ ಗಿಡದ ಮೊಗ್ಗು ಚಿಗುರುಗಳನ್ನು ಕೂಡ ತಿನ್ನಬಹುದಾಗಿದೆ. ಇವುಗಳಿಂದ ಚಟ್ನಿ, ತಂಬುಳಿ ಮಾಡಿ ಸೇವಿಸುವದು ಹಳ್ಳಿಗಳಲ್ಲಿ ರೂಢಿಯಿದೆ.

ಮಣ್ಣಿನಿಂದ ಮಾಡಿದ ನೆಲದ ಮೇಲೆ ಚಿಕ್ಕ ಮಕ್ಕಳು ಮೂತ್ರ ಮಾಡಿ ಆ ಮೂತ್ರವು ಒಣಗಿದಾಗ ಅಲ್ಲಿ ಬಿಳಿ ಅಂಶ ಕಂಡುಬಂದರೆ ಅದನ್ನು ಧಾತು ಎಂದು ಜಾನಪದರು ಗುರುತಿಸುತ್ತಾರೆ. ಇದು ಒಂದು ಬಗೆಯ ಸಾಮಾನ್ಯ ರೋಗವೆಂದು ತಿಳಿಯುತ್ತಾರೆ. ಮೂತ್ರದಲ್ಲಿ ಧಾತು ಹೋಗುವದರಿಂದ ಮಕ್ಕಳು ಅಶಕ್ತರಾಗುತ್ತಾರೆ ಎಂಬ ಅಭಿಪ್ರಾಯಗಳಿವೆ. ಈ ರೋಗ ನಿವಾರಣೆಗಾಗಿ ಬಿಳಿ ಹೂವಿನ ಕುಸುಮಾಲೆಯ ಗಿಡದ ಬೇರನ್ನು ಅಕ್ಕಚ್ಚಿನ ನೀರಿನಲ್ಲಿ ತೇದು ನಲವತ್ತೈದು ದಿನ ಮಕ್ಕಳಿಗೆ ಕುಡಿಸುತ್ತಾರೆ. ಇದಲ್ಲದೆ ಉರಗೆ ಗಡ್ಡೆ ಮತ್ತು ಕುಸುಮಾಲೆ ಬೇರುಗಳ ಸಿಪ್ಪೆಯನ್ನು. ಒಣಗಿಸಿ ಪುಡಿ ಮಾಡಿಟ್ಟುಕೊಂಡು ಕಷಾಯ ಮಾಡಿ ಮಕ್ಕಳಿಗೆ ಕುಡಿಸುತ್ತಾರೆ. ನಿರೋಗಿಗಳೂ ಕುಡಿಯಬಹುದಾದ ಪಾನೀಯವಿದು.ತಲೆಕೂದಲನ್ನು ರಕ್ಷಣೆಮಾಡುವ ಗುಣವು ಇದರ ಹೂವಿಗಿದೆಯೆಂದು ತಿಳಿಯಲಾಗುತ್ತದೆ. ಕರ್ನಾಟಕದಲ್ಲಿ  ನೆಲೆಸಿದ ಕೇರಳಿಗರು ಕೆಂಪು ಕುಸುಮಾಲೆಯ ಹೂವನ್ನು ಕೂದಲೆಣ್ಣೆ ತಯಾರಿಕೆಯಲ್ಲಿ ಬಳಸುವದನ್ನು ಗಮನಿಸಲಾಗಿದೆ

ಇದು ಒಳ್ಳೆಯ ಟೋನಿಕ್ ಎಂದು ಜನ ನಂಬಿಗೆಯಿದೆ ಹೂ, ಮೊಕ್ಕೆ, ಹಣ್ಣು ಕಾಯಿಗಳನ್ನು ಮತ್ತುಚಿಗುರನ್ನು ಕೂಡಿಸಿ ಅರೆದು ಬೆಲ್ಲ  ಕಲ್ಲುಸಕ್ಕರೆ ಸೇರಿಸಿ ಲೇಹ ಮಾಡಿಟ್ಟುಕೊಳ್ಳುವದು ಉತ್ತಮ. ಶಿಶುಗಳಿಗೆ ಕಜ್ಜಿ, ಮೈ ತುರಿಕೆಯಿದ್ದಾಗ ಹೂವಿನ ಕೇಸರವನ್ನು ತೆಗೆದು ಹಾಕಿ ಹೂವನ್ನು ತೊಳೆದು ತೊಳದ ಮೊಗ್ಗು, ಕಾಯಿ ಹೂವುಗಳನ್ನು ಕೂಡಿಸಿ ಜಜ್ಜಿ, ರಸವನ್ನು ಹಿಂಡಿ ವಯಸ್ಸಿಗೆ ಅನುಗುಣವಾಗಿ ಅರ್ಧ ಚಮಚದಿಂದ ಒಂದೆರಡು ಚಮಚದವರೆಗೆ ಸೇವನೆಗೆ ನೀಡಬಹುದು.
     
       ಜನಪದ ಧಾರ್ಮಿಕ ಆಚರಣೆಯಲ್ಲಿಯೂ ಇದನ್ನು ಬಳಸುತ್ತಾರೆ. ಉತ್ತರ ಕನ್ನಡ ಜಿಲ್ಲೆಯ ಅಮ್ಮನವರ ಬಂಡಿಹಬ್ಬದ ದಿನ ಅಮ್ಮನವರ ಕಳಸ ಹೊರಡುವಾಗ ಅಮ್ಮನವರಿಗೆ ಬಲಿ ಸೇವೆ ಸಲ್ಲಿಸುವ ಹರಕೆ ಹೊರುತ್ತಾರೆ. ಬಲಿ
ಸೇವೆಯೆಂದರೆ ಅಮ್ಮನವರು ಹೊರಡುವ ದಾರಿಯಲ್ಲಿ ಕೂಗುತ್ತ ಓಡುವದು. ಈ ಬಲಿಸೇವೆ ಸಲ್ಲಿಸುವವರನ್ನು ಬಲಿ ಮಕ್ಕಳು ಎನ್ನುತ್ತಾರೆ. ಬಲಿ ಮಕ್ಕಳು ಕುಸುಮಾಲೆ ಹೂವಿನ ಮಾಲೆಯನ್ನು ಧರಿಸುತ್ತಾರೆ. ಇತರ ಕಡೆ ದೇವಿ ಪೂಜೆಗೂ ಇದನ್ನು ಬಳಸುವದುಂಟು.
         
ಇತ್ತೀಚೆಗೆ ಬಹು ಬಣ್ಣದ ಹಲವು ಆಕಾರದ ಕುಸುಮಾಲೆ ಗಿಡಗಳು ತೋಟದ ಅಲಂಕಾರವನ್ನುಹೆಚ್ಚಿಸಿವೆ. ಆದರೆ ನಮ್ಮ ಹಿರಿಯರು ಬಲ್ಲ ಕೆಂಪು ಬಿಳಿ ಕುಸುಮಾಲೆ ಗಿಡಗಳಂತೆ ಇವು ಔಷಧ ಮಹತ್ವವನ್ನು ತಿಳಿಸುತ್ತಿಲ್ಲ. ನಮ್ಮ ಹಳೆಯ ಕುಸುಮಾಲೆಗಳು ಮರೆಯಾಗದಂತೆ ರಕ್ಷಿಸುವದು ನಮ್ಮ ಹೊಣೆ ನೀವು ಕೆಂಪು ಬಿಳಿ ಹೂವಿನ ಎರಡು ಗಿಡಗಳನ್ನು ಒಂದೆಡೆ ನೆಟ್ಟು ಅದರ ಅಂದ ನೋಡಿ ಆನಂದಿಸಿರಿ.

ನಮ್ಮಗಿಡ ಮರಬಳ್ಳಿಗಳು- ಹಲಸಿನ ಮರ


ಹಲಸಿನಮರ  Atrocarpus integrifolia Linn-idian jacktree
     
       ಹಲಸಿನ ಮರವು ಭಾರತ ಮೂಲದ್ದಾಗಿದ್ದು ಇದರ ಬಗ್ಗೆ ಸುಮಾರು 4000ವರ್ಷಗಳ ಹಿಂದಿನ ಪ್ರಾಚೀನ ದಾಖಲೆಗಳು ದೊರೆಯುತ್ತವೆ. ಪ್ರಾಚೀನ ಅಡುಗೆ ಪುಸ್ತಕವಾದ ಮಂಗರಸನ ಸೂಪ ಶಾಸ್ತ್ರದಲ್ಲಿ ಹಲಸಿನ ಅಡುಗೆಯನ್ನು ಹಲವಾರು ಪುಟಗಳಲ್ಲಿ ವಿವರಿಸಲಾಗಿದೆ. ಇಡಿಯ ಹಲಸಿನ ಕಾಯಿಯನ್ನೇ ಕಟ್ಟಿಗೆಯ ಅಟ್ಟಣಿಗೆಯ ಬೆಂಕಿಯ ಮೇಲಿಟ್ಟು ಬದನೆಯಕಾಯಿಯಂತೆ ಬೇಯಿಸುವ ಮಂಗರಸನ ವಿಧಾನವನ್ನು ಓದುವಾಗ ವಿಸ್ಮಯವಾಗುತ್ತದೆ.

       ಹಲಸಿನ ಹಣ್ಣು ಪ್ರಪಂಚದಲ್ಲಿಯೇ ಬಹು ದೊಡ್ಡ ಹಣ್ಣು. ಆದ್ದರಿಂದ ಮಾವು ಹಣ್ಣುಗಳ ರಾಜನಾದರೆ ಹಲಸು ಹಣ್ಣುಗಳ ಅಣ್ಣ. ಹಣ್ಣುಗಳು ಅರ್ಧ ಮೀಟರಿನಷ್ಟು ಉದ್ದ. ಇಲ್ಲಿ ಚಿಕ್ಕ ಹಣ್ಣಿನ ತಳಿಗಳೂ ಇವೆ. ಸುಲಿದ ತೆಂಗಿನ ಕಾಯಿ ಗಾತ್ರದ ಸುಂದರ ರುದ್ರಾಕ್ಷಿ ಹಲಸು ಪಶ್ಚಿಮ ಕರಾವಳಿಯಲ್ಲಿ ವಿರಲವಾಗಿ ಕಂಡು ಬರುತ್ತವೆ.

      ಹಲಸು ಹೂ ಬಿಡುವದಿಲ್ಲವೆಂಬುದು ಜನಸಾಮಾನ್ಯರ ನಂಬಿಕೆ.ಆದರೆ ವಸಂತ ಕಾಲದಲ್ಲಿ ಇದು ಹೂ ಬಿಡುತ್ತದೆ. ನಮಗೆ ಮರದಲ್ಲಿ ಕಾಣುವದು ಹೂ ಗೊಂಚಲು. ಇದು ಬಿಡಿ ಹೂವಲ್ಲ.ಇದರ ಹೂ ಗೊಂಚಲು  ಬೆರಳುದ್ದದಲ್ಲಿದ್ದು ಮಿನಿ ಹಲಸಿನಕಾಯಿಯಂತೆ ಕಾಣುತ್ತದೆ. ಈ ಗೊಂಚಲಿನಲ್ಲಿ ಹತ್ತಿಪ್ಪತ್ತರಿಂದ ನೂರಾರು ಬಿಡಿ ಹೂಗಳಿರುತ್ತವೆ ಆದರೆ ಇದರ ಹೂಗಳ ಪಕಳೆಗಳು ಬರಿಗಣ್ಣಿಗೆ ಕಾಣಿಸದಷ್ಟು ಸೂಕ್ಷ್ಮವಾಗಿರುತ್ತವೆ. ಹೂ ಗೊಂಚಲಿನಲ್ಲಿ ಎರಡು ಪ್ರಕಾರ. ಒಂದು ಗಂಡು ಇನ್ನೊಂದು ಹೆಣ್ಣು.  ಗಂಡು ಹೂಗೊಂಚಲು ಹೆಣ್ಣು ಹೂವಿನ ಗೊಂಚಲಿಗಿಂತ ಉದ್ದವಾಗಿ ರುತ್ತದೆ. ತನ್ನಲ್ಲಿರುವ ಪರಾಗ ಕಣಗಳನ್ನು ಹೆಣ್ಣು ಹೂವಿಗೆ ಮುಟ್ಟಿಸಿದ ಬಳಿಕ ಅದು ಮಸಿ ಕಪ್ಪು ಬಣ್ಣಕ್ಕೆ ತಿರುಗಿ ಉದುರುತ್ತದೆ. ಪರಾಗವನ್ನು  ಪಡೆದ ಹೆಣ್ಣು ಹೂವುಗಳ ಗೊಂಚಲು ಹಲವು ಹಣ್ಣುಗಳ ಮೂಡೆಯಾಗಿ  ಬೆಳೆಯುತ್ತದೆ. 

    ಆದ್ದರಿಂದ ಇದು ಹಣ್ಣಿನೊಳಗೊಂದು ಹಣ್ಣು ವಿಸ್ಮಯದ ಹಣ್ಣು. ಎಂದು ಒಗಟು ಕಟ್ಟಬಹುದು. ಏಕೆಂದರೆ .ಒಂದಲ್ಲ; ಹಲವಾರು ಹಣ್ಣುಗಳು ಇದರೊಡಲಲ್ಲಿರುತ್ತವೆ. ಇದರ ಕುಟುಂಬಕ್ಕೆ ಸೇರಿದ ವಾಟೆ ಹೆಬ್ಬಲಸು, ಸೀತಾಫಲ, ರಾಮ ಫಲ, ಇತ್ಯಾದಿ ಸುಮಾರು 18 ಪ್ರಭೇದದ ಮರಗಳು ನಮ್ಮ ನಾಡಿನಲ್ಲಿವೆ. ಈ ಹಣ್ಣುಗಳ ಹೊಟ್ಟೆಯಲ್ಲಿಯೂ ಹಲವಾರು ಹಣ್ಣುಗಳಿರುವದನ್ನು ಗಮನಿಸಬಹುದು.

   ಭಾರತದಲ್ಲಿ ಹಲಸಿನ ತವರು ಪಶ್ಚಿಮ ಘಟ್ಟ ಭಾರತದ ಹಲವು ಕಡೆ ಇದು ಕಂಡು ಬರುತ್ತದೆ. ಆದರೆ ಪಶ್ಚಿಮ ಘಟ್ಟದ ಹಣ್ಣು ತುಂಬ ರುಚಿ..
    
  ಹಲಸಿನ ಹಣ್ಣು ಕಾಡಿನ ಪ್ರಾಣಿ ಪಕ್ಷಿಗಳಿಗೆ ಉತ್ತಮ ಆಹಾರ. ಇಲ್ಲಿಯ ಕರಡಿಗಳಿಗೆ ಬೇಸಿಗೆ ಮಳೆಗಾಲಗಳ ಸಂಧಿ ಕಾಲದಲ್ಲಿ ಭೂರಿ ಭೋಜನ. ಇದೇ ಕಾಲದಲ್ಲಿ ಕಾಡಿನಲ್ಲಿ ವಿವಿಧ ಹೂಗಳ ಸುಗ್ಗಿ. ಕಾಡಿನ ಜೇನುಹುಟ್ಟು ಜೇನಿನಿಂದ ತುಂಬಿಕೊಳ್ಳುತ್ತದೆ. ಹಲಸಿನ ಹಣ್ಣುಗಳು ಬಿರಿದು ನೆಲದ ಮೇಲೆ ಬಿದ್ದಿರುತ್ತವೆ .ಹಣ್ಣನ್ನು ಮೆಲ್ಲಲು ಬಂದ ಕರಡಿಗಳಿಗೆ ಮರದ ಮೇಲಿನ ಜೇನಿನ ಪರಿಮಳ  ಮೂಗಿಗೆ  ಹೊಡೆಯುತ್ತದೆ. ಕರಡಿ ಎರಡೂ ಕೈಯಿಂದ ಹಲಸಿನ ಹಣ್ಣನ್ನು ಮೆಲ್ಲುತ್ತದೆ; ಅಲ್ಲಿಂದ ಅದು ಮರ ಹತ್ತಿ ಜೇನನ್ನು ಸುರಿಯುತ್ತದೆ. ಇದು ಕರಡಿಯ ಭಾಗ್ಯ.  

ಹಲಸಿನ ಹಣ್ಣು; ಕರಡಿಯ ಆಹಾರವಷ್ಟೆ ಅಲ್ಲ, ನಾಡಿನ  ಮನುಷ್ಯರ ಆಹಾರವೂ ಆಗಿದೆ. ಆದರೇನು ಮಾಡುವದು. ಮನುಷ್ಯ ನಾಜೂಕಾಗಿದ್ದಾನೆ. ಕರಡಿಯಂತೆ ತಿನ್ನಲು ಶಕ್ತನಾಗಿಲ್ಲ. ಹಿಂದೆ ಮಲೆನಾಡು ಕರಾವಳಿಯ ಶ್ರಮ ಜೀವಿಗಳಿಗೆ ಬಡತನ ಬಂದಾಗ ಅವರ ಹಸಿವನ್ನು ನೀಗಿಸಿ ಜೀವವುಳಿಸಿದ ಹಣ್ಣು ಇದು. ದುಡಿಯಲು ಶಕ್ತಿ ನೀಡಿದ ಹಣ್ಣು ಇದು .50 ವರ್ಷಗಳ ಹಿಂದೆ ಈ ಹಣ್ಣನ್ನು ಕೃತಜ್ಞತೆಯಿಂದ ನೆನೆಯುವ ಜನರಿದ್ದರು. ಹಲಸಿನ ಹಣ್ಣನ್ನು ಅದರ ಪರಿಮಳವನ್ನು ಮೋಹಿಸುವವರು ಹೆಚ್ಚಿನ ಸಂಖ್ಯೆಯಲ್ಲಿದ್ದರು .ಎರಡು ಮೂರು ದಿನ ಬೇರೆ ಆಹಾರ ಸೇವಿಸದೆ ಈ ಹಣ್ಣಿನ ಮೇಲೆಯೇ ಜೀವಿಸುತ್ತಿದ್ದ ಕೂಲಿಕಾರರನ್ನು ತಾನು ಕಂಡುದಾಗಿ  ಶ್ರೀ ಎಸ್.ಕೆ. ಕಲ್ಲಾಪುರ ತಿಳಿಸುತ್ತಾರೆ.(1979)

    ಇದು ಅಡುಗೆಗೂ ಸೈ. ಕರಾವಳಿ ಮಲೆನಾಡುಗಳ ಹಳೆಯ ಅಡುಗೆಯಲ್ಲಿ ಹಲಸಿನ ಗುಜಕೆಗಳು, ಬೆಳೆದ ಕಾಯಿಗಳು ಜನಪ್ರಿಯವಾಗಿದ್ದವು. ಮದುವೆಯಂತಹ ಸಾವಿರಾರು ಜನರ ಊಟದಲ್ಲಿ ಬೆಳೆದ ಹಲಸಿನ ಕಾಯಿಯ ಹುಳಗ[ಹೊಳ್ಳಗ-ಹುಳಿ] ವೆಂಬ ಹೆಸರಿನ ಮೇಲೋಗರಕ್ಕೆ ಅಗ್ರ ಸ್ಥಾನವಿತ್ತು. ಸಾವಿರ ಜನರ ಊಟಕ್ಕೆ ಮನೆಯ ತೋಟದಲ್ಲಿ ಬೆಳೆದ ಕೆಲವೇ ಹಲಸಿನ ಕಾಯಿಗಳು ಸಾಲುತ್ತಿದ್ದವು.  ಹಸಿದು ಉಣ್ಣುತ್ತಿದ್ದರು. ಈಗಿನಂತೆ ಹಸಿಯದವರು ಅರೆ ಬರೆ ಉಣ್ಣುವ ಮದುವೆ ಊಟಕ್ಕೆ ಲಕ್ಷಾಂತರ ಹಣ ಖರ್ಚಾಗುತ್ತಿರಲಿಲ್ಲ..  

ಹಲಸಿನ  ಹಣ್ಣು ಜೀವಸತ್ತ್ವಗಳ ಗಣಿ. ಬೆಳೆದ ಕಾಯಿಯಲ್ಲಿ ಸಾಕಷ್ಟು  ಜೀವ ರಕ್ಷಕ ಅಂಶಗಳಿವೆ. ಹಣ್ಣಿನ ತೊಳೆಗಳಲ್ಲಿ ಪ್ರತಿ ಶತ 18.9 ರಷ್ಟು ಪಿಷ್ಟವಿದೆ. ಬೀಜದಲ್ಲಿ ಇದು ಇನ್ನೂ ಹೆಚ್ಚಿದೆ. ಆದರೆ ಇದು  ಕೆಲವರ ಜೀರ್ಣ ಕ್ರಿಯೆಯಲ್ಲಿ ತೊಂದರೆಯನ್ನು ತರುತ್ತದೆಯಂತೆ. ಇದು ಬೀಜದ ಅಥವಾ ಹಣ್ಣಿನ ತಪ್ಪಲ್ಲ ಅದನ್ನು ತಿನ್ನುವವರ ಕ್ರಮದಲ್ಲಿ ದೋಷವಿದೆ. ಅವರ ಜೀರ್ಣ ಶಕ್ತಿಯಲ್ಲಿ ದೋಷವಿದೆ. ಹಸಿದು ಹಲಸು ತಿನ್ನು ಎಂಬುದು ಅನುಭವಿಕರ ಮಾತು . ಹಲಸು ತಿಂದಾಗ ಪಿಷ್ಟಯುಕ್ತ ಇತರ ಆಹಾರವನ್ನು ಕಡಿಮೆ ಸೇವಿಸಬೇಕು. ಹಣ್ಣನ್ನು ತಮ್ಮ ತಮ್ಮ ಜೀರ್ಣ ಶಕ್ತಿಯ ಮಟ್ಟವನ್ನು ನೋಡಿ ಸೇವಿಸಬೇಕು. ಜೀರ್ಣಶಕ್ತಿಯಿದ್ದವರು ದಿನಕ್ಕೆ ಮೂರು ಬಾರಿ ಸ್ವಲ್ಪ ಸ್ವಲ್ಪ ಊಟಕ್ಕೆ ಮೊದಲು ತಿನ್ನಬಹುದು. ಹಣ್ಣನ್ನು ತಿನ್ನುವಾಗ ಜೇನು ಬಳಸಬೇಕು. ತುಸು ತೆಂಗಿನೆಣ್ಣೆ ಹನಿಸಿಕೊಂಡು ಸೇವಿಸಿದರೆ ಹಣ್ಣು ಕರುಳಿನಲ್ಲಿ ಸಿಕ್ಕಿಕೊಳ್ಳದೆ ಕೆಳಗೆ ಜಾರುತ್ತದೆಯೆಂಬುದು ಅನುಭವ ವೈದ್ಯದ ಅಭಿಪ್ರಾಯ. ಕರಾವಳಿಯಲ್ಲಿ ಮತ್ತು ಪಶ್ಚಿಮ ಗಟ್ಟದ ಹಣ್ಣುಗಳಲ್ಲಿ ಎರಡು ತರ ಒಂದು ಚಕ್ಕೆ. ಇದರ ತೊಳೆಗಳು ಮೃದು.  ಇನ್ನೊಂದು ಬಕ್ಕೆ ಇದರ ತೊಳೆ. ತುಸು .ಗಟ್ಟಿ. ಕೆಲವರಿಗೆ ಚಕ್ಕೆ ಪ್ರಿಯವಾದರೆ ಕೆಲವರಿಗೆ ಬಕ್ಕೆ ಪ್ರಿಯ. ಇನ್ನು ಕೆಲವರಿಗೆ ಎರಡೂ ಬಗೆಯ ಹಣ್ಣು ಪ್ರಿಯ. ಇದು ದೇವರಿಗೂ ಪ್ರಿಯ. ಗ್ರಾಮ ದೇವರ ಹಬ್ಬದಲ್ಲಿ.  ಭಕ್ತರ ರೋಗ ರುಜಿನ ಇತರ ಸಂಕಟಗಳನ್ನು ದೂರ ಮಾಡಿದಗ್ರಾಮ ದೇವರಿಗೆ  ನೀಡುವ ತುಲಾಭಾರ ಆಚರಣೆಯಲ್ಲಿ ಈ ಹಣ್ಣನ್ನೇ ಆಯ್ದುಕೊಳ್ಳುವಲ್ಲಿ ಭಕ್ತರ ಜಾಣತನವಿದೆ. ಒಡೆಯನ ಮನೆಗೆ ಹೋಗಿ ಒಡೆಯನ ಹಬ್ಬಗಾಣ್ಕೆಗೂ ರೈತನಿಗೆ ಈ ಹಣ್ಣು ಬೇಕು. ಈ ಆಚರಣೆ ತಮಿಳು ಶಿಲಪ್ಪದಿ ಕಾರಂ ದಷ್ಟು ಹಳೆಯದು. ಆಕಾಶದಲ್ಲಿಯ ದೇವರಿಗೂ ಹಲಸಿನ ಚಕ್ಕೆಯ ಹೋಮವಾಗಬೇಕು. 

     ನಮ್ಮ ನಾಡಿನಲ್ಲಿ ಹಲಸಿನ ಕಾಯಿಯ ಮತ್ತು ಹಣ್ಣಿನ ಚಾರೆಯ ಮುಳ್ಳನ್ನು ಹೊರತು ಪಡಿಸಿ ಇದರ  ಸರ್ವಾಂಗವನ್ನು ಅಡುಗೆಗೆ ಬಳಸಬಲ್ಲ ತಜ್ಞೆಯರಿದ್ದಾರೆ. ಚಾರೆಯ ಒಳ ಭಾಗವನ್ನು ಅಂಚು ಎನ್ನುತ್ತಾರೆ    

     ಇವರು .ಅಂಚು, ಕಿರು ತೊಳೆ ,ಹಿರಿ ತೊಳೆ ಬೀಜ ಮತ್ತು ಹಣ್ಣಿನೊಳಿಗಿನ  ದಿಂಡನ್ನೂ ಅಡುಗೆ ಮಾಡಬಲ್ಲರು. ಎಳೆ ಕಾಯಿಯಲ್ಲಿಯೂ ಜೀವಸತ್ವ ತುಂಬಿರುತ್ತದೆ. ನಮ್ಮ ಮಹಿಳೆಯರಿಗೆ ಎಳೆ ಕಾಯಿಯನ್ನು ತರಕಾರಿಯಂತೆ ಅಡುವ ಲವಲವಕೆಯು ಹೆಚ್ಚು,  ಪಟ್ಟಣಗಳಲ್ಲಿ ಮಿಡಿ ಹಲಸಿನ ಕಾಯಿಗಳು  ಮಾರಾಟಕ್ಕೂ ಬರುತ್ತವೆ. ಮಿಡಿ ಹಲಸಿನಕಾಯನ್ನು (ಗುಜಕೆ)  ಕೊಯ್ದು  ಅಡುಗೆಗೆ ಅಣಿ ಮಾಡುವಾಗ ಕೈಗೆ ಅಂಟುವ ಅಂಟನ್ನು ಪರಿಗಣಿಸದೆ ಇವರು ಅಡುಗೆಗೆ ಅದನ್ನು ಬಿಡಿಸಿಕೊಳ್ಳುವ ಕೆಲಸಲ್ಲಿ ನಿರತರಾಗುತ್ತಾರೆ. ಇದರ  ತಾಳ್ಳು ಪಲ್ಯದ ರುಚಿಯ ಮುಂದೆ ಇದನ್ನು ತರಕಾರಿಯಾಗಿ ಬಿಡಿಸಿಕೊಳ್ಳುವ ಕೆಲಸವು ಇವರಿಗೆ ನಗಣ್ಯವೆನಿಸುತ್ತದೆ.
     ಬಗೆಯಲ್ಲಿ ಸಿಹಿ ತಿಂಡಿ ತಯಾರಿಸಿ  ತಿನ್ನುವದು ನಮ್ಮ ನಾಡಿನ ಜನರಿಗೆ ಅತ್ಯಂತ ಪ್ರಿಯ. ಪಾಯಸ, ಕಡಬು, ದೋಸೆ,  ಸುಟ್ಟೇವು, ಸಿರಾ, ಕಡಿ, ಹಲ್ವಾ.  ಪಕೋಡ , ಕೇಸರಿಬಾತು, ದೋಸೆ, ಪಾನಕ, ಮುಳಕ, ಸೀಕರಣೆ ಗಳನ್ನು  ಅಡುತ್ತಾರೆ. ಹಲಸಿನ ಹಣ್ಣಿನ ಸುಟ್ಟೇವು ಜಟಕಾದಿ ಕೆಲವು ಜನಪದ ದೇವರಗೆ ಇಷ್ಟವಾದ ನೈವೇದ್ಯ. ಬೆಳೆದ ಕಾಯಿಗಳ ಹಪ್ಪಳ ದೋಸೆ ಗಳು ಇಲ್ಲಿ ಪ್ರಸಿದ್ಧ .  ಇಲ್ಲಿ ಅಕ್ಕಿಯನ್ನು  ಕೂಡಿಸದೆ  ಕೇವಲ ಸೊಳೆಗಳನ್ನು ಅರೆದು ದೋಸೆ ಮಾಡ ಬಹುದಾದ ವಿಶೇಷತೆಯನ್ನು ಹೊಂದಿದ ಹಲಸಿನ ಕಾಯಿಗಳಿವೆ. ಇವು ತಮ್ಮಲ್ಲಿ ಅಕ್ಕಿಯಂತಹ ಪಿಷ್ಟವಿದೆಯೆಂಬುದನ್ನು ಸಾಬೀತು ಪಡಿಸುತ್ತವೆ.. ಬೇಸಿಗೆಯಲ್ಲಿ ಹಲಸಿನ ಪೇಪರ್ ದೋಸೆ ಮಾವಿನ ಹಣ್ಣಿನ ಸೀಕರಣೆಗಳ ಜೋಡು ನೀಡುವ ಸವಿ ರುಚಿ ಮರೆಯಲಾಗುವಂಥದ್ದಲ್ಲ. ಈ ದೋಸೆಯನ್ನು ಒಣಗಿಸಿ ಹಪ್ಪಳದಂತೆ ಕಾಯ್ದಿಟ್ಟು ಕೊಳ್ಳುತ್ತಾರೆ. ಹಲಸಿನ ಕಾಯಿಯ ಹಪ್ಪಳದ ಉದ್ಯೋಗವು ಕರಾವಳಿ ಮಲೆನಾಡಿನ ಕೆಲವು ಭಾಗಗಳಲ್ಲಿ ಗೃಹ ಉದ್ಯೋಗವಾಗಿ ಬೆಳೆದಿದೆ. ಒಣಗಿಸಿದ ದೋಸೆ ತಯಾರಿಯನ್ನು ಕೂಡ ಗೃಹ ಕೈಗಾರಿಕೆಯಲ್ಲಿ ಸೇರಿಸಿಕೊಳ್ಳಬಹುದಾಗಿದೆ.. ಬೆಳೆದ ಸೊಳೆಯಲ್ಲಿಯ ಬೀಜವನ್ನು ಬೇರ್ಪಡಿಸಿ ಉಪ್ಪಿನ ನೀರಿನಲ್ಲಿ ತೊಳೆಗಳನ್ನು ಕಾದಿಟ್ಟು ಮಳೆಗಾಲದಲ್ಲಿ ಹಲವು ವಿಧದ ಅಡುಗೆಯನ್ನು ತಯಾರಿಸುತ್ತಾರೆ. 
         
ಬೀಜಗಳನ್ನು ತಿಪ್ಪೆಗೆಸೆಯುವ ತಪ್ಪು ಮಾಡುವದಿಲ್ಲ. ಅದೊಂದು ಉತ್ತಮ ಆಹಾರವೆಂದು ಪರಿಗಣಿಸುತ್ತಾರೆ. ಬೀಜದಿಂದ ಸುಕಿನುಂಡೆ. ಚಟ್ನಿ ಪುಡಿ. ಬುಡ್ಡಣ. ಸಾರು, ಹುಳಿ. ಪಲ್ಯ. ಪಾಯಸ. ಹೋಳಿಗೆ. ಮಡ್ಡಿ   ತಯಾರಿಸುವದು ಇವರಿಗೆ ನೀರು ಕುಡಿದಷ್ಟು ಸುಲಭ. ಬೀಜದ ಸೇವನೆಯನ್ನು ಕೂಡ ಹಲವಾರು ಅಚರಣೆಗಳ ಮೂಲಕ ಕಡ್ಡಾಯಗೊಳಿಸಿಕೊಂಡಿದ್ದಾರೆ. .ಕುಡಿ ತಿಂಗಳಲ್ಲಿ ಇದರ ಕಜ್ಜಾಯ ಅಡಬೇಕೆಂಬುದು ಈ ತಿಂಗಳ ಆಚರಣೆಯ ಒಂದು ಅಂಗ. ಘಟ್ಟದ ಮೇಲಿನ  ಊರುಗಳಲ್ಲಿ ನಾಗರ ಪಂಚಮಿಯ ದಿನ ಬೇಳೆಯನ್ನು ಹುರಿದು ಮಕ್ಕಳ ಕೈಗೆ ಕೊಡದೆ ಮನೆಯೊಳಗೆಲ್ಲ ಬೀರುತ್ತಾರೆ. ಮಕ್ಕಳು ಅವುಗಳನ್ನು ಹೆಕ್ಕಿ ತಿನ್ನಬೇಕು. ಈ ಆಚರಣೆಯಿಂದ ಮೈಗೆ ಕಜ್ಜಿಯಾಗುವದಿಲ್ಲವೆಂಬ ನಂಬಿಕೆಯಿದೆ. ಈ ಆಚರಣೆಗಳು ಮತ್ತು ಪಾಕ ತಜ್ಞೆಯರ ಈ ಜ್ಞಾನ, ಅಡುವಕಲೆ ಈ ಮುಂದಿನ ತಲೆ ಮಾರಿಗೆ ಹರಿಯ ಬೇಕಾಗಿದೆ. ಆದರೆ ಹಲಸಿನ ಬೀಜವನ್ನು ಅಡುವವರ ಕೊರತೆಯಿಂದಾಗಿ, ಪಿಜ್ಜಾ ಬರ್ಗರ್ ಪ್ರಿಯರ್ ಹಾವಳಿಯಿಂದಾಗಿ ಅಮೂಲ್ಯ ಹಲಸಿನ ಬೀಜಗಳು  ತಿಪ್ಪೆ ಸೇರುವದನ್ನು ನೋಡುವಾಗ ಮನಸ್ಸಿಗೆ ತಾಪವಾಗುತ್ತದೆ.

    ಇದು ಆಹಾರ ಮಹತ್ವದ ಜೊತೆಗೆ, ಔಷಧ ಮಹತ್ವವನ್ನೂ ಹೊಂದಿದೆ. ಹಲಸಿನ ಮರ ನಮ್ಮ ದೇಹ ಪೋಷಕ ವೈದ್ಯ. ಇದು ದೆ.ಹಕ್ಕೆ ಬಲವನ್ನು ಕೊಡುತ್ತದೆ. ಕಾಡುಹಣ್ಣುಗಳನ್ನು ಬಿಟ್ಟರೆ ಸಧ್ಯ ಇಪ್ಪತ್ತೊಂದನೆಯ ಶತಶತ ಮಾನದ ಪ್ರಾರಂಭದ ಕಾಲದವರೆಗೂ ಇದು ಕೀಟ ನಾಶಕ ರಹಿತ ತರಕಾರಿ ಮತ್ತು ಹಣ್ಣಾಗಿ ಉಳಿದಿದೆ. ಮುಂದೆ ಹೇಗೋ ಏನೋ. ಇದರ ಬೇರಿನ ಕಷಾಯ ಅತಿಸಾರಕ್ಕೆ ಮದ್ದು ಹಣ್ಣು ಫಲಕಾರಿ. ಪಿತ್ತದ ತೊಂದರೆಯನ್ನು ನಿವಾರಿಸುವ ಅಪೂರ್ವ ಗುಣ ಹಣ್ಣಿನಲ್ಲಿದೆ. ಹಲಸಿನ ಮರದ ಅಣಂಬೆ ಚರ್ಮ ರೋಗಗಳಿಗೆ ಮದ್ದು. ಹಲಸಿನೆಲೆಯ ಕೊಟ್ಟೆಯಲ್ಲಿ ತಯಾರಿಸಿದ ಕೊಟ್ಟೆ ರೊಟ್ಟಿ ಆರೋಗ್ಯದಾಯಕ ವೆಂದು ತಿಳಿದವರು ಬಲ್ಲರು.
        
ಸುಮಾರು 300 ವರ್ಷಗಳ ಹಿಂದಿನ ಮಾತು. ಇಂಥ ಅನ್ನಪೂರ್ಣ ಹಲಸಿನ ಮರಗಳಿಗೆ ಕೆಟ್ಟ ಕಾಲ ಕೂಡಿ ಬಂತು. ಮರಗೆಲಸದ ಆಚಾರಿಗಳಿಗೆ ಇವರ ಉಳಿಗೆ ಬಗ್ಗುವ ಒಗ್ಗುವ ಇದರ ಗುಣ ಅರಿವಾದದ್ದೇ ತಡ ,ತಮ್ಮ ಕಲೆಯನ್ನು ಈ ಮರಗಳ ಮೇಲೆ ಪ್ರಯೋಗಿಸಿದರು. ಕಲಾ ರಸಿಕರು ತಮ್ಮ ತಮ್ಮ ಹೊಸ ಮನೆಯ ಅಲಂಕಾರಕ್ಕೆಂದು ತೋರ ತೋರದ ಇಡಿ ಇಡಿಯ ಮರಗಳನ್ನೇ ತಂದು ಕುಸುರು ಕೆತ್ತಿಸಿ ಮನೆಯಲ್ಲಿ ಎಲ್ಲೆಂದರಲ್ಲಿ ನಿಲ್ಲಿಸಿ ಹೆಮ್ಮೆ ಪಟ್ಟರು. ನಾಡಿನ ಕಲಾ ಸಿರಿವಂತಿಕೆ ಹೆಚ್ಚಿತು. ಆದರೆ ಬಡವರ ಆಹಾರ ಸಂಪತ್ತಿಗೆ ಕುತ್ತು ಬಂತು ಭೂಮಿ ಮರುಗಿತ್ತು.
   
   ಈಗ ಹಲಸಿನ ಮರಗಳನ್ನು ಬೆಳೆಸಿ ಭೂಮಿಯ ಹಾಗೂ ನಮ್ಮ ಒಡಲಿಗೆ ಹಿತವನ್ನುಂಟು ಮಾಡಬೇಕಾಗಿದೆ. ನಿಮಗೆ ಮರ ಬೆಳಿಸಬೇಕೆನಸಿದರೆ ತಡ ಮಾಡಬೇಡಿ. ನೆಡಲು ತಡ ಮಾಡಿದರೆ ಬೀಜಗಳು ಸಾಯುತ್ತವೆ. ಏಕೆಂದರೆ ಅವಕ್ಕೆ ಜೀವಶಕ್ತಿ ಕಡಿಮೆ. ತೊಳೆಯಿಂದ ಹೊರಬಂದ ಒಂದು ವಾರ ದಲ್ಲಿಯೇ ಬೀಜಗಳನ್ನು ನೆಡುವದು ಉತ್ತಮ. ಕಸಿ ಹಲಸಿನ ಮರಗಳು ಜನಪ್ರಿಯವಾಗುತ್ತಿವೆ.

ನಮ್ಮ ಗಿಡ ಮರಬಳ್ಳಿಗಳು-ಸಾಗುವಾನಿ



ಸಾಗುವಾನಿ -TectonagrandisLinn teak
   
         
    ಇದಕ್ಕೆ ತೇಗ ಎಂಬ ಇನ್ನೊಂದು ಹೆಸರಿದೆ. ಟೀಕ್ವುಡ್ಡ್ ಎಂದು ಹಲವರು ಇದನ್ನು ಗುರುತಿಸುತ್ತಾರೆ.
 
    ಸಾಗವಾನಿ ಬಹು ದೊಡ್ಡ ಮರ. ಮೊಳವುದ್ದದ ಅಗಲ ಎಲೆಗಳ ಎದುರು ಬದುರು ಜೋಡಣೆ. ಚಿಗುರು ನಸುಗೆಂಪು, ಎಲೆಗಳನ್ನು ತಿಕ್ಕಿದರೆ ಕೈಗೆ ಕೆಂಪು ಬಣ್ಣ ಹತ್ತಿಕೊಳ್ಳುತ್ತದೆ. ಬೆಳೆದ ಎಲೆಯ ಬಣ್ಣ ಹಸಿರು. ಹೂಗಳು ಬಿಳಿ ನಕ್ಷತ್ರದಂತೆ. ನೆಲಕ್ಕೆ ಬಿದ್ದ ಹೂಗಳು ಬಕುಳದ ಹೂವಿನಂತೆ ತೂತು ಹೊಂದಿರುತ್ತವೆ. ತೂತಿನಲ್ಲಿ ದಾರವನ್ನು ತೂರಿಸಿ ಇವುಗಳನ್ನು ಪೋಣಿಸ ಬಹುದು. ಕಾಯಿಗೆ ಒಂದೇ ಬೀಜ, ಸುಮಾರು ಅರವತ್ತು ವರ್ಷಗಳ ಹಿಂದೆ ನಮ್ಮೂರಿನಲ್ಲಿ ಒಂದೆ ಗಣಪತಿಯಿತ್ತು. ಚವತಿಯ ಹಬ್ಬದಲಿ ನಾವು ಮಕ್ಕಳು ಹಿರಿಯರು ಆ ಗಣಪತಿಯ ದರ್ಶನ ಪಡೆಯಲು ಹೋಗುತ್ತಿದ್ದೆವು. ಆಗ ಪ್ಲಾಸ್ಟಿಕ್ ಬಳಕೆಯಲ್ಲಿರಲಿಲ್ಲ. ಅಲ್ಲಿಯ ಪೂಜಾರಿಗಳು ದರ್ಶನಕ್ಕೆ ಬಂದವರಿಗೆ ಸಾಗುವಾನಿ ಎಲೆಯಲ್ಲಿ ತೆಂಗಿನ ಕಾಯಿಸುಳಿ ಬೆಲ್ಲ ಬೆರೆಸಿದ ಬತ್ತದ ಹೊದಳನ್ನು ಪ್ರಸಾದವಾಗಿ ಕೊಡುತ್ತಿದ್ದರು. ಉಡುಪಿ ಜಿಲ್ಲೆಯ ಚೇರ್ಕಾಡಿಯ ಸುತ್ತಮುತ್ತಲಿನ ಹಳ್ಳಿಗಳಲ್ಲಿ ಸಾಗುವಾನಿ ಎಲೆಯನ್ನು ಮುಚ್ಚಿಗೆಯಾಗಿ ಬಳಸಿ ಹಲಸಿನ ಹಣ್ಣಿನ ಕಡಬನ್ನು ಬೇಯಿಸುತ್ತಾರೆ.  ಸಾಗುವಾನಿ ಎಲೆಯಲ್ಲಿ ಕಡಬು ಬೆಂದಾಗ ಕಡಬಿನ ಬಣ್ಣ ಕೆಂಪಗಾಗುತ್ತದೆ. ಈ ಕೆಂಪು ಕಡಬನ್ನು ಕಡಬು ಪ್ರಿಯರು ಕೋಳಿ ಸಾರಿನೊಂದಿಗೆ ತಿನ್ನುತ್ತಾರೆ. ಹಲಸಿನ ಹಣ್ಣಿನ ಕಾಲ ಮುಗಿಯುತ್ತ ಬಂದಾಗ. ಸಸ್ಯಾಹಾರಿ ಭಕ್ತರು ಸಾಗುವಾನಿ ಎಲೆಯಲ್ಲಿ ಹಲಸಿನ ಹಣ್ಣಿನ ಖಾದ್ಯ ಮಾಡಿ ಜಟಗ,ಬಬ್ಬರಿ ಯಾದಿ ಜನಪದ ದೇವರುಗಳಿಗೂ ಅರ್ಪಿಸುತ್ತಾರೆ..  
        
ಇದರ ಮದ್ದಿನ ಗುಣವು ಅಪೂರ್ವವಾದದ್ದು. ಒಮ್ಮೆ ನನ್ನ ಕೈ ಬಲಭಾಗಕ್ಕೆ ಬಿಸಿ ಗಂಜಿ ಬಿದ್ದು ಅಲ್ಲಿ ಗುಳ್ಳೆಗಳೆದ್ದವು ಸುಟ್ಟ ಗುಳ್ಳೆಗಳೆದ್ದಾಗ ಸಾಗವಾನಿ ಎಣ್ಣೆ ಹಚ್ಚುವದು ಮನೆ ಮದ್ದಿನ ಒಂದು ಕ್ರಮ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈ ಎಣ್ಣೆಯ ಬಳಕೆ ಹೆಚ್ಚು. ನಾನು ಅಗತ್ಯ ಬಿದ್ದಾಗ ಇರಲಿ ಎಂದು ಕೊಬ್ಬರಿ ಎಣ್ಣೆಯಲ್ಲಿ ಸಾಗವಾನಿ ಚಿಗುರನ್ನು ಹಾಕಿ ನನ್ನ ಸುಟ್ಟ ಗಾಯಕ್ಕೆ ಆ ಎಣ್ಣೆಯನ್ನು ಹಚ್ಚಿದೆ. ಯಾವ ವೈದ್ಯರ ಬಳಿಗೂ ಹೋಗಲಿಲ್ಲ. ಗುಳ್ಳೆ  ಒಡೆದ ಗಾಯಕ್ಕೂ ಸಾಗುವಾನಿ ಎಣ್ಣೆಯದೇ ಮದ್ದು.
       
ನನ್ನ ಸುಟ್ಟ ಗಾಯ ತೊಂದರೆ ಕೊಡಲಿಲ್ಲ. ಈ ನಡುವೆ ನನಗೆ ಈ ಮೂರು ನಾಲ್ಕು ದಿನಗಳಲ್ಲಿ ಸೊಳ್ಳೆ ಕಾಟ ಬರಲಿಲ್ಲ. ಆಕೆ ಎಂದು ಯೋಚನೆ ಮಾಡಿದೆ. ನಾನು ನನ್ನ ಸುಟ್ಟಗಾಯಕ್ಕೆ ಹಚ್ಚಿಕೊಂಡ ಸಾಗುವಾನಿ ಎಣ್ಣೆಯ ಪ್ರಭಾವದಿಂದಾಗಿ ಸೊಳ್ಳೆಗಳು ನನ್ನ ಬಳಿ ಸುಳಿಯಲಿಲ್ಲವೆಂದು ತಿಳಿದುಕೊಂಡೆ.
      
 
ಈ ಅನುಭವ ಪಡೆದ ನಾನು ಒಮ್ಮೆ ಹಳದಿಪುರದ ಹಾಲಕ್ಕಿ ಒಕ್ಕಲ ಕೇರಿಗೆ ಹೋಗಿದ್ದೆ. ಅಲ್ಲೊಂದು ಸಾಗವಾನಿ ಮರವಿತ್ತು. ನನ್ನ ಬಳಿ ನಾಲ್ಕಾರು ಜನ ನಿಂತಿದ್ದರು. ನಾನು ಬಲ್ಲ ಮದ್ದು ಇವರಿಗೂ ತಿಳಿಯಲಿ ಎಂದುಕೊಂಡು ಇದರ ಎಣ್ಣೆ ಸುಟ್ಟಗಾಯಗಳಿಗೆ ಮದ್ದು. ಇದು ನಿಮಗೆ ಗೊತ್ತೆ ಎಂದೆ. ಆಗ ಅವರಲ್ಲೊಬ್ಬರು ಅಷ್ಟೇ ಅಲ್ಲ ಈ ಎಣ್ಣೆಯನ್ನು ಮೈಗೆ ಕೈ ಕಾಲುಗಳಿಗೆ ಹಚ್ಚಿಕೊಂಡರೆ ಸೊಳ್ಳೆಗಳು ಇತ್ತ ಸುಳಿಯುವುದಿಲ್ಲ ಎಂದರು. ನನ್ನ ಅನುಭವಕ್ಕೆ ಇನ್ನೊಬ್ಬರ ಈ ಅನುಭವದ ದೃಢೀಕರಣವಾಯಿತು. ಹೌದು ನನಗೂ ಇದು ತಿಳಿದಿದೆ. ನೀವು ಸೊಳ್ಳೆ ಓಡಿಸಲು ಈ ಎಣ್ಣೆಯನ್ನು ಯಾಕೆ ಬಳಸುವುದಿಲ್ಲ? ಎಂದು ಕೇಳಿದೆ. ಸೊಳ್ಳೆ ಓಡಿಸಲು ನಾವು ಹೊಗೆ ಹಾಕುತ್ತೇವೆ. ಎಲ್ಲರಿಗೂ ಇದರಿಂದ ಉಪಯೋಗವಾಗುತ್ತದೆ. ಕೇರಿಯವರೆಲ್ಲ ಹೊಗೆ ಹಾಕುವುದರಿಂದ ಸೊಳ್ಳೆಗಳು ಇಲ್ಲಿ ಬರುವುದಿಲ್ಲ ಎಂದರು. ಇವರ ಅಡುಗೆ ಮನೆಯಿಂದ ಕಟ್ಟಿಗೆ ಉರಿಸಿದ ಹೊಗೆ ಹೊರಬಂದು ಕೇರಿಯ ಜನರಿಗೆ ಸೊಳ್ಳೆಯ ಕಾಟ ತಪ್ಪುತ್ತದೆ.
      
   ನಮ್ಮ ಮನೆಗೆ ಕೆಲಸಕ್ಕೆ ಬರುವ ಗೌರಿ ಅಮ್ಮಾ ಇವತ್ತು ಸೊಳ್ಳೆ ಜಾಸ್ತಿ.ಹೊರಗೆ ಹುಲ್ಲು ಕೀಳಲು ಕೊಡುವುದಿಲ್ಲ.ಆ ದಿನ ಕೊಟ್ಟ ಆ ಕೆಂಪ ಎಣ್ಣೆ ಕೊಡಿ ಎನ್ನುತ್ತಾಳೆ.ಕೆಂಪೆಣ್ಣೆ ಹಚ್ಚಿಕೊಂಡು ಹೊರಗಿನ ಕೆಲಸಕ್ಕೆ ನಡೆಯುತ್ತಾಳೆ.
      
     ನನಗೂ ಈಗಿತ್ತಲಾಗಿ ಸಾಗುವಾನಿ ಎಣ್ಣೆಯ ಸೊಳ್ಳೆ ನಿರೋಧಕ ಶಕ್ತಿಯ ಮೇಲೆ ನಂಬಿಕೆ ಬಂದಿದೆ. ಇಷ್ಟು ದಿನ ಮುಂಜಾನೆ ಸೊಳ್ಳೆಯ ಪರದೆಯ ಒಳಗಿಟ್ಟು ಲ್ಯಾಪ್ ಟಾಪನ್ನು ತೆರೆಯುತ್ತಿದ್ದೆ. ಈಗ ಸೊಳ್ಳೆಯ.ಪರದೆಯ ಹಂಗಿಲ್ಲದೆ ಟೇಬಲ ಮೇಲೆ ಲ್ಯಾಪ್ ಟಾಪ್ನ ಕೆಲಸ ಕೈಗೊಳ್ಳುತ್ತಿದ್ದೇ?? 
   
   ಸಾಗುವಾನಿ ಎಣ್ಣೆ ಮಾಡಿಟ್ಟಿದ್ದೆ. ನೀವೂ ಸಾಗವಾನಿ ಎಣ್ಣೆಯನ್ನು ತಯಾರಿಸಿಕೊಳ್ಳಬಹುದು. ಕೊಬ್ಬರಿ ಎಣ್ಣೆಯಲ್ಲಿ ನಸುಗೆಂಪು ಮತ್ತು ಹಸಿರಾದ ಎಳೆ ಎಲೆಗಳನ್ನು ಹರಿದು ಹಾಕಿ ಸಳಗುಡುವ ಶಬ್ದ ನಿಲ್ಲುವವರೆಗೆ ಕಾಸಿದರೆ ಕಡು ಗುಲಾಬಿ ಕೆಂಪು ಎಣ್ಣೆ ಸಿದ್ದವಾಗುತ್ತದೆ. ಇದನ್ನು ತಣಿಸಿ ಬಾಟ್ಲಿಯಲ್ಲಿ ತುಂಬಿಟ್ಟು ಕೊಳ್ಳಿರಿ. ಬಳಸಿನೋಡಿರಿ. ಎಣ್ಣೆ ಹಚ್ಚಿಕೊಳ್ಳುವಾಗ ಹೊಸ ಬಟ್ಟೆ ಬೇಡ. ಪ್ರತಿದಿನ ಒಗೆದಿರುವ ಬಟ್ಟೆಯನ್ನೇ ಧರಿಸಿಕೊಂಡರೆ ಉತ್ತಮ.
     
ಸಾಗುವಾನಿ ಎಣ್ಣೆಯನ್ನು ನಿತ್ಯ ಪಾದಕ್ಕೆ ಹಚ್ಚಿ ಕೊಳ್ಳುವುದರಿಂದ ಪಾದದ ಬಿರುಕು ದೂರವಾಗಿ ಪಾದ ನಯಗೊಳ್ಳುತ್ತದೆ..
ಕೂದಲಿಗೂ ನಾನು ಇದನ್ನು ಬಳಸಿದ್ದೇನೆ. ಕೂದಲ ಮೇಲೆ ವ್ಯತಿರಿಕ್ತ ಪರಿಣಾಮವಾದ ಹಾಗೆ ಕಂಡಿಲ್ಲ. ಕೈ ಕಾಲುಗಳ ರೋಮಗಳ ಬಣ್ಣದಲ್ಲಿ ವ್ಯತ್ಯಾಸವಾಗಿಲ್ಲ.
    
  ಸಾಗುವಾನಿ ಹೂಗಳ ಎಣ್ಣೆ ತಯಾರಿಸಬಹುದೆಂದು ಹಳೆಯ ವೈದ್ಯಗ್ರಂಥದಲ್ಲಿ ಓದಿದ ನೆನಪು. ಆದರೆ ಹೂಗಳನ್ನು ಸಂಗ್ರಹಿಸುವುದು ಕಷ್ಟ, ಮಳೆಗಾಲದಲ್ಲಿ ನೆಲದ ಮೇಲೆ ಹೂಗಳು ಉದುರುತ್ತವೆ. ಆಗ ಒಂದು ಸೀರೆಯ ತುಂಡನ್ನು ಅಲ್ಲಿ ಹಾಸಿಟ್ಟರೆ ಮುಂಜಾನೆ ಬೊಗಸೆ ತುಂಬ ಪರಿಮಳದ ಹೂ ಪಡೆಯಬಹುದು. ಇದನ್ನು ಎಣ್ಣೆ ಮಾಡಲು ಬಳಸಬಹುದು. [ ಮಕ್ಕಳಿಗಾಗಿ ಬರೆದ ಬರೆಹಕ್ಕೆ ಇಲ್ಲಿ ನನ್ನ ಅನುಭವದಿಂದ ದೊರೆತ ಹೆಚ್ಚಿನ ಅಂಶಗಳನ್ನು ಸೇರಿಸಲಾಗಿದ ]

ನಮ್ಮ ಗಿಡ ಮರಬಳ್ಳಿಗಳು- ತುಂಬೆ



 ತುಂಬೆ  Leucas cephalotes[Roth]sprengel   
ಇದು ಭಾರತದ ಎಲ್ಲ ಭಾಗದಲ್ಲಿ ಕಂಡುಬರುವ ಕಳೆಗಿಡ. ಮಳೆಗಾಲದಲ್ಲಿ ತಂತಾನೆ ಎಲ್ಲ ತರದ ಭೂಮಿಯಲ್ಲಿ ಇದು ಬೆಳೆಯುತ್ತದೆ. ಗದ್ದೆ ಹೊಲಗಳ ಮೂಲೆಯಲ್ಲಿ ಹಾಳುಬಿದ್ದ ಬಯಲಿನಲ್ಲಿ ಹಾದಿಯ ಬದಿಯಲ್ಲಿ ಹಚ್ಚ ಹಸುರಾಗಿ ಬೆಳೆಯುತ್ತದೆ. ನೀರಿನ ಪಸೆ ಸಿಕ್ಕರೆ ಬೇಸಿಗೆಯಲ್ಲಿಯೂ ಚೆನ್ನಾಗಿ ಬೆಳೆಯುತ್ತದೆ. ತುಂಬೆ ಆಯುರ್ವೇದದಲ್ಲಿ  ಹಾಗೂ ಜನಪದ ವೈದ್ಯದಲ್ಲಿ ಬಳಕೆಯಾಗುವ ಒಂದು ಚಿಕ್ಕ ಔಷಧ  ಸಂಸ್ಕೃತದಲ್ಲಿ ದ್ರೋಣ ಪುಷ್ಪವೆನ್ನುತ್ತಾರೆ.

ಸಾಮಾನ್ಯವಾಗಿ ತುಂಬೆ ಹೂ ಶಿವನಿಗೆ ಪ್ರಿಯವಾದ ಹೂವೆಂದು ತಿಳಿಯಲಾಗುತ್ತದೆ. ಆದ್ದರಿಂದ ಇದನ್ನು ರುದ್ರ ಪುಷ್ಪವೆನ್ನುತ್ತಾರೆ. ಬೀರ ಎಂಬ ಹೆಸರಿನ ಜನಪದ ದೇವರಿಗೆ ಪೂಜೆಯ ಮೊದಲು ಜಳಕ ಮಾಡಿಸಿ ದೇವರ ಮೈತುಂಬ ತುಂಬೆ ಹೂವನ್ನು ಬಿಡಿಬಿಡಿಯಾಗಿ ಅಂಟಿಸಲಾಗುತ್ತದೆ.  ಕಲ್ಲಿನ ಮೂರ್ತಿಗಳಿಗೆ ನೀರಿನ ಸ್ನಾನ ಮಾಡಿಸಿದ ಬಳಿಕ ಹೂವುಗಳನ್ನು ಅಂಟಿಸುವ ಕಾರಣ ಅವು ಅಲ್ಲಿ ಅವು ಅಂಟಿಕೊಳ್ಳುತ್ತವೆ. ಹೂವನ್ನು ಹೊನ್ನಾವರದ ಸಾಲಿಕೆರೆಯಲ್ಲಿ ಗ್ರಾಮದೇವರಿಗೆ ಮೈಗೆ ಅಂಟಿಸುತ್ತಾರೆ, ದೇವರ ಬಳಿ ಪ್ರಶ್ನೆ ಕೇಳಲು ಬಂದವರು ತಮ್ಮ ಕೆಲಸ ಸಾಧ್ಯವಾಗುವುದಾದರೆ ತಾವು ಸೂಚಿಸಿದ ಯಾವುದಾದರೂ ಒಂದು ಭಾಗದ ಹೂ ಬೀಳಲಿ ಎನ್ನುತ್ತಾರೆ. ಹೂ ಬಿದ್ದರೆ ಖುಶಿ ಪಡುತ್ತಾರೆ. ಈ ಕ್ರಿಯೆಗೆ ಹೂ ಕೇಳುವದು ಎನ್ನುತ್ತಾರೆ.

ಕೆಲವು ಪುರಾಣಗಳ ಪ್ರಕಾರ ಇದು ವಿಷ ಹಾರಿ. ದೇವಾಸುರರು ಸಮುದ್ರ ಮಥನ ಮಾಡುತ್ತಿದ್ದ ಕಾಲದಲ್ಲಿ ಪ್ರಥಮವಾಗಿ ಹೊರಬಂದ ವಿಷವನ್ನು ಕಂಡು ದೇವಾಸುರರು ಹೆದರಿ ದೂರ ಸರಿದಾಗ ಲೋಕ ಕಲ್ಯಾಣಕ್ಕಾಗಿ ಶಿವನು ಆ ವಿಷವನ್ನು ತಾನೇ ಕುಡಿದನು ಎಂದು ಪುರಾಣಗಳು ಹೇಳುತ್ತವೆ. .ಪುರಾಣಿಕರು ಶಿವನ ದೇಹದಲ್ಲಿ ಸೇರಿದ ಆ ವಿಷ ನಿವಾರಣೆಗಾಗಿ ಶಿವನಿಗೆ ತುಂಬೆ ಹೂವನ್ನು ಅರ್ಪಿಸುವ ಪದ್ಧತಿ ರೂಢಿಗೆ ಬಂದಿದೆಯೆಂದು ಅವರು ತಿಳಿಸುತ್ತಾರೆ. ಈ ಆಚರಣೆಯ ಹಿನ್ನೆಲೆಯು ತುಂಬಿ ಗಿಡವು ದೇಹದಲ್ಲಿಯ ವಿಷವನ್ನು ಅಂದರೆ ಅನಗತ್ಯ ರೋಗಾಣು ಗಳನ್ನು ದೂರ ಮಾಡುತ್ತದೆ ಎಂಬ ಅಂಶದ ಮೇಲೆ ಬೆಳಕು ಚಲ್ಲುತ್ತದೆ. ಸಾಮಾನ್ಯವಾಗಿ ಮನುಷ್ಯರ ರೋಗ ನಿರೋಧಕ ಗುಣದ ಗಿಡಮರ ಬಳ್ಳಿಗಳ ಅಂಗಾಂಗ ಗಳನ್ನು ದೇವರಿಗೆ ಅರ್ಪಿಸುವುದು ಜನಪದ ಆಚರಣೆಯಲ್ಲಿ ಕಂಡು ಬರುವ ಮಹತ್ವದ ಅಂಶ.

ಇದು ಮನೆಮದ್ದಿನಲ್ಲಿ ಬಳಕೆಯಾಗುವ ಉತ್ತಮ ಗಿಡ. ಇದರ ಎಲೆಯ ರಸವನ್ನು ತುಸು ಜೇನು ಬೆರೆಸಿ ಮಕ್ಕಳಿಗೆ ದೊಡ್ದವರಿಗೆ ಒಂದು ಚಮಚದಿಂದ ನಾಲ್ಕು ಚಮಚದವರೆಗೆ ಅವರವರ ವಯಸ್ಸಿಗೆ ತಕ್ಕಂತೆ ನೀಡಿದರೆ ಮಕ್ಕಳ ಕಫ ದೂರವಾಗುತ್ತದೆ.

Monday 13 August, 2012

ನಮ್ಮ ಗಿಡ ಮರ ಬಳ್ಳಿಗಳು- ಉತ್ರಾಣೆ ಗಿಡ


ಉತ್ರಾಣೆ ಗಿಡ - Achyranthes aspera,Linn Amaranthacae



ಇದು ಸುಮಾರು ಒಂದರಿಂದ ಮೂರು ನಾಲ್ಕು ಅಡಿ ಎತ್ತರ ಬೆಳೆಯುವ ವಾರ್ಷಿಕೆ. ಇದಕ್ಕೆ ಸಂಸ್ಕೃತದಲ್ಲಿ ಅಪಾಮಾರ್ಗವೆಂಬ ಹೆಸರಿದೆ.  ಏಕೆಂದರೆ  ಇದರ  ಬೀಜಗಳು  ದೇಟಿ ಗುಂಟ  ಹಿಮ್ಮುಖವಾಗಿ ಬೆಳೆಯುತ್ತವೆ  ಬಿಳಿ ಉತ್ರಾಣೆಯನ್ನು ಸಸ್ಯಶಾಸ್ತ್ರಜ್ಞರು ಅಚರಾಂಥಸ್ ಅಸ್ಪರಾ ಎಂದು ಗುರುತಿಸುತ್ತಾರೆ..
     
ಇದು  ಜನ  ನೆಟ್ಟು ಬೆಳೆಸುವ ಗಿಡವಲ್ಲ. ಭೂಮಿಯು  ಜನರ ನೆರವಿಲ್ಲದೆ ಜನರಿಗಾಗಿ ತಾನೇ ಇದನ್ನು ಬೆಳೆಸುತ್ತದೆ. ಇದರ ಪರಿಚಯವಿಲ್ಲದವರು ಇದನ್ನು ಕಳೆ ಗಿಡಗಳ ಸಾಲಿನಲ್ಲಿ ಸೇರಿಸಿದ್ದಾರೆ. ಆದರೆ ಪ್ರಾಚೀನ ಕಾಲದಿಂದ ಅನೇಕ ಮನೆ ಮದ್ದುಗಾರರು ಅಡುಗೆ ಬಲ್ಲ ಗೃಹಿಣಿಯರು ಹಾಗೂ ಅನೇಕ ಋಷಿ ಮುನಿಗಳು ಇದನ್ನು ಬಲ್ಲವರಾಗಿದ್ದರು.

ಈ ಗಿಡವು  ಬಹಳ ಹಿಂದಿನಿಂದ ಮನೆಮದ್ದಿನಲ್ಲಿ ಬಳಕೆಯಲ್ಲಿದ್ದರೂ ಬಳಿಕ ಇದರ ಮನೆ ಮದ್ದನ್ನು ಮರೆತವರ ಸಂಖ್ಯೆಯೇ ಹೆಚ್ಚು. ಇದು ಕಫ ಮತ್ತು ವಾತ ನಾಶಕವಾಗಿದೆ. ಕಿವಿನೋವು ಕಣ್ಣು ನೋವುಗಳಲ್ಲಿಯೂ ಉಪಯುಕ್ತವಾಗಿದೆ. ಪಚನ ಕ್ರಿಯೆಯನ್ನು ಸಮ. ಸ್ಥಿತಿಯಲ್ಲಿಡಬಹುದು ಇದರ ಬೀಜವನ್ನು ತಿನ್ನುವದರಿಂದ ಅಥವಾ ಪಾಯಸ ಮಾಡಿ ಸೇವಿಸುವದರಿಂದ ಅತಿ ಹಸಿವೆ ದೂರವಾಗುತ್ತದೆ., ಇತ್ಯಾದಿಯಾಗಿ ಇದರ ಮದ್ದಿನ ಗುಣದ ಬಗ್ಗೆ ಹಳೆಯ ಗ್ರಂಥಗಳಲ್ಲಿ ಅಪೂರ್ವ ಮಾಹಿತಿಗಳಿವೆ. ಬೆಂಗಳೂರಿನ ಬೆರಕೆ ಸೊಪ್ಪು ಮಾರಾಟಗಾರ ಮಹಿಳೆಯರು ತಾವು ಮಾರುವ ಬೆರಕೆ ಸೊಪ್ಪಿನಲ್ಲಿ ಇದರ ಕೆಲವು ಚಿಗುರುಗಳನ್ನು ಸೇರಿಸುವದನ್ನು ಗಮನಿಸಲಾಗಿದೆ.ಆದರೆ ಗಿಡವನ್ನು ಗುರುತಿಸುವವರು ಅತ್ಯಂತ ವಿರಳವಾಗಿದ್ದಾರೆ. ಶಾಲಾ ಮಕ್ಕಳಿಗೆ ಅವರ ತಾಯಂದಿರಿಗೆ ಇಂತಹ ಅಪೂರ್ವ ಗಿಡಗಳ ಪರಿಚಯ ಮಾಡಿಸಿ ಕೊಡುವ ಅಗತ್ಯವಿದೆ.

   ಈ ಗಿಡಗಳು ಜನರ ಪರಿಚಯದಲ್ಲಿರಲಿ ಎಂಬ ಉದ್ದೇಶದಿಂದ ನಮ್ಮ ಹಿರಿಯರು ಇದನ್ನು ಧಾರ್ಮಿಕ ಆಚರಣೆಗಳಲ್ಲಿ ಬಳಸುವ ಪ್ರಕ್ರಿಯೆಯನ್ನು ಜಾರಿಗೆ ತಂದಿದ್ದರು. ಸಪ್ತ ಮುನಿಗಳಲ್ಲಿ ಒಬ್ಬರಾದ ಭಾರದ್ವಾಜ ಮುನಿಗೆ ಈಗಿಡವು ಪ್ರಿಯವಾದದ್ದು ಎಂದು ಭವಿಷ್ಯೋತ್ತರ ಪುರಾಣದಲ್ಲಿ ಹೇಳಿದೆ. ಸಪ್ತರ್ಷಿ ವನದಲ್ಲಿ ಮತ್ತು ಸಪ್ತರ್ಷಿ ಪೂಜಾ ವ್ರತದಲ್ಲಿ ಇದಕ್ಕೆ ಸ್ಥಾನ ಕಲ್ಪಿಸಲಾಗಿದೆ. ಭಕ್ತರು ಇದನ್ನು ಪೂಜೆಯಲ್ಲಿ ಬಳಸುತ್ತಾರೆ; ದೇವರಿಗೆ ಇದರ ಎಲೆಯನ್ನು ಅರ್ಪಿಸುತ್ತಾರೆ..
. ಇದು ಹಲ್ಲುಗಳ ರಕ್ಷಣೆಯಲ್ಲಿ ಮಹತ್ವದ ಮೂಲಿಕೆಯಾಗಿದೆಯೆಂದು  ನಮ್ಮ ಹಿರಿಯರು ತಿಳಿದಿದ್ದರು. ಪ್ರತಿನಿತ್ಯ ಉತ್ರಾಣೆ ಕಡ್ಡಿಯಿಂದ ಹಲ್ಲುಜ್ಜುವದರಿಂದ ಹಲ್ಲು ಉತ್ತಮಗೊಳ್ಳುತ್ತದೆಯೆಂದು ಅನುಭವಿಗಳ ಅಂಬೋಣವಿದೆ. ಉತ್ತರ ಭಾರತದ ಅನೇಕ ಹಳ್ಳಿಗರು ತಮ್ಮ ಹಲ್ಲುಗಳನ್ನು ಇದರ ಹಸಿಕಡ್ಡಿಯಿಂದ ತಿಕ್ಕುವ ಕಾರಣ ಅವರ ಹಲ್ಲುಗಳು ವಯಸ್ಸು ಎಂಬತ್ತು ದಾಟಿದರೂ ಗಟ್ಟಿಮುಟ್ಟಾಗಿರುತ್ತವೆಯೆಂಬ ವರದಿಗಳಿವೆ. ಭಾದ್ರಪದ ಮಾಸದ ಗಣೇಶ ಚವತಿಯ ಮರುದಿನ ಪಂಚಮಿಯಂದು ಮಾತ್ರ ವಿಧವೆಯರಿಗೆ ಉತ್ರಾಣೆ ಕಡ್ಡಿಯಿಂದ ಹಲ್ಲು ತಿಕ್ಕಲು ಅವಕಾಶ ಮಾಡಿಕೊಡುವ ಆಚರಣೆ ಜಾರಿಯಲ್ಲಿದೆ. ಆದರೆ ಈ ಧಾರ್ಮಿಕ ಆಚರಣೆಗಳ ಹಿನ್ನೆಲೆಯನ್ನರಿಯದವರು  ಈ ಕೆಲಸವನ್ನು ವಯಸ್ಕರಿಗೆ ಮೀಸಲಿಟ್ಟು ತಾವು ಕಂಪನಿ ಪೇಸ್ಟಗಳ ಮೊರೆ ಹೋಗಿದ್ದಾರೆ. ಹಿರಿ ಕಿರಿಯರು ಇದನ್ನು ಬಳಸುವ ಕ್ರಮವು ದೂರವಾಗಿ ಇದರ ಪರಿಚಯ ಜನರಿಂದ ದೂರವಾಗುತ್ತಿದೆ.

   ಉತ್ರಾಣೆಯಲ್ಲಿ ಬಿಳಿ ಕೆಂಪು ಮತ್ತು ಹಸಿರು ಬಣ್ಣದ ಬಗೆ ಗಳು ಬಳಕೆಯಲ್ಲಿ ಕಂಡುಬರುತ್ತವೆ. ಕೆಂಪು ಉತ್ರಾಣಿಯು ಜನಪದ ಧಾರ್ಮಿಕ ಆಚರಣೆಯಲ್ಲಿ ಸ್ಥಾನ ಪಡೆದಿದೆ. ಬಾಳಂತಿಯರು ಇದನ್ನು ಪೂಜಿಸುತ್ತಾರೆ. ಅದರೆ ಇವರಿಗೆ ಈ ಪೂಜೆಯ ಹಿನ್ನೆಲೆಯ ಅರಿವಿಲ್ಲ. ಇದು ಸುಖ ಪ್ರಸವಕ್ಕೆ ಸಹಾಯ ಮಾಡುವ ಮೂಲಿಕೆಯೆಂಬುದನ್ನು ಇವರು ಮರೆತಿದ್ದಾರೆ. ಎರಡನೆಯ ಬಾರಿ ಅಕ್ಕಿ ತೊಳೆದ ನೀರಿನಲ್ಲಿ ಬಿಳಿ ಬಣ್ಣದ ಉತ್ರಾಣೆಯ ಬೀಜವನ್ನು ನೆನೆಯಿಸಿ ಕುಡಿದರೆ ಮೂಲವ್ಯಾಧಿಯು ಗುಣವಾಗುತ್ತದೆ.

     ಅಚ್ಚ ಹಸಿರು ಬಣ್ಣದ ಕಾಡು ಉತ್ರಾಣಿಯನ್ನು ಹಳ್ಳಿಗರು ಇದ್ರಸೆ ಗಿಡ ಎನ್ನುತ್ತಾರೆ. ಇದನ್ನು ಮಕ್ಕಳ ಶ್ವಾಸ ಸಂಬಂಧಿಯಾದ ಇದ್ರಸೆ ಎಂಬ ರೋಗಕ್ಕಾಗಿ ಬಳಸುತ್ತಿದ್ದಾರೆ. ಇಂತಹ ಅನೇಕ ಮದ್ದಿನ ಗಿಡಗಳ ಅರಿವು ನಮ್ಮ ಪೂರ್ವಜರು ನೀಡಿದ ನಿಧಿ.ಇದನ್ನು ರಕ್ಷಿಕೊಳ್ಳುವದು ನಮ್ಮ ನಿಮ್ಮ ಕರ್ತವ್ಯ. ಈ ಬಗ್ಗೆ ತ್ವರಿತ ಅಧ್ಯಯನವು ನಡೆಯಬೇಕಾಗಿದೆ.

Friday 10 August, 2012

ನಮ್ಮ ಗಿಡ ಮರಬಳ್ಳಿಗಳು-ಸಾವಿರ ಸಂಬಾರ ಸೊಪ್ಪು



 ಸಾವಿರ ಸಂಬಾರಸೊಪ್ಪು 
   coleus aromaticus  Benth              

 ಇದಕ್ಕೆ ಸಾಂಬಾರು ಸೊಪ್ಪಿನಬಳ್ಳಿ, ದೊಡ್ಡಪತ್ರೆ:- ಇತ್ಯಾದಿ ಕನ್ನಡ ಹೆಸರುಗಳಿವೆ. ಸಂಸ್ಕೃತದಲ್ಲಿ ಅಜಪಾದ ಇಂದು ಪರ್ಣ ಎನ್ನುತ್ತಾರೆ. ಕೋಲಿಯಸ್ ಅಂಬೋನಿಕಸ್ ಇದು ಇದರ ಸಸ್ಯಶಾಸ್ರ್ತೀಯ ದ್ವಿನಾಮ ಇದು ಲೆಮಿನೇಸಿ ಕುಟುಂಬಕ್ಕೆ ಸೇರಿದೆ.
ಸಾವಿರ ಸಂಬಾರಗಿಡವು ನೆಲದ ಮೇಲೆ ಪೊದೆಯಾಕಾರದಲ್ಲಿ ಬೆಳೆಯುತ್ತದೆ. ಇದರ ಹೆಸರಿನ ಜೊತೆ ಬಳ್ಳಿ ಶಬ್ದ ಸೇರಿದ್ದರೂ ಇದು  ಬಳ್ಳಿಯಲ್ಲ. ಆದರೆ ನೆರಳಿರುವಲ್ಲಿ ಅಥವಾ ಆಧಾರವು ದೊರೆತರೆ ಬಸಲೆಯಂತೆ ತುಸು ಉದ್ದವಾಗಿ ಹಬ್ಬಿಕೊಳ್ಳುತ್ತದೆ.ಎದುರು ಬದುರು ಇರುವ ದಪ್ಪ ರಸಭರಿತ ಎಲೆಗಳು ಹಸುರಾಗಿದ್ದು ತುಂಬಾ ಸುವಾಸನೆಯುಳ್ಳದ್ದಾಗಿವೆ. ಗಿಡಗಳು ಚೆನ್ನಾಗಿ ಬಲಿತಮೇಲೆ ಜ್ಯೇಷ್ಟದಿಂದ ಭಾದ್ರಪದ ಮಾಸದವರೆಗೆ ಹಸುರಾದ ಸುವಾಸನಾಭರಿತ ಹೂ ಬಿಡುತ್ತವೆ. 

ಪಶ್ಚಿಮ ಕರಾವಳಿಯಲ್ಲಿ ಹಾಗೂ ದಕ್ಷಿಣ ಕರ್ನಾಟಕದ ಅನೇಕರು ಇದನ್ನು ಮನೆಮದ್ದು ಮತ್ತು ಅಡುಗೆಯಲ್ಲಿ ಬಳಸುತ್ತಾರೆ ಎಲೆಯಿಂದ . ರಸ ತೆಗೆಯುವ ಮುನ್ನ ಅಡುಗೆ ಮಾಡಲು,ಕಟ್ಟಿಗೆ ಒಲೆ ಉರಿಸಿದ ನೆಲದ ಮೇಲೆ ಎಲೆಗಳನ್ನು ಇಟ್ಟು ಬಾಡಿಸಿಕೊಳ್ಳುತ್ತಾರೆ ಎಲೆಗಳು ಬಾಡಿಸಿದರೆ ರಸವನ್ನು ಹಿಂಡಿಕೊಳ್ಳುವದು ಸುಲಭವಾಗುತ್ತದೆ. ಆಧುನಿಕ ಸಂದರ್ಭದಲ್ಲಿ ಕಟ್ಟಿಗೆ ಒಲೆ ಬಳಕೆಯಿಲ್ಲದ ಕಡೆ, ಎಲೆಗಳನ್ನು ಬಿಸಿಲಿನಲ್ಲಿ ಬಾಡಿಸಿ ಅಥವಾ ಸಣ್ಣ ಉರಿಯ ಮೇಲಿಟ್ಟು ಕಾಸಿದ ಪಾತ್ರೆಯ ಮೇಲೆ ಎಲೆಗಳನ್ನಿಟ್ಟು ಬಾಡಿಸಿಕೊಳ್ಳಬಹುದು. ಎಲೆಗಳನ್ನು ಬಾಳೆ ಎಲೆಯಲ್ಲಿಟ್ಟು ಬಾಳೆ ಎಲೆಯನ್ನು ಸುತ್ತಿ ಅದನ್ನು ಬೂದಿಮುಚ್ಚಿದ ಕೆಂಡದಲ್ಲಿ ಹುಗಿದು ಬಾಳೆ ಎಲೆಯು ತುಸು ಬಾಡಿದಾಗ ಹೊರತೆಗೆದು ಒಳಗಿರುವ ಸಂಬಾರ ಸೊಪ್ಪನ್ನು ಹಿಂಡಿ ರಸ ಪಡೆಯುವದು ಇನ್ನೊಂದು ಜನಪದ ಪದ್ಧತಿ ಈ ಪದ್ಧತಿಯನ್ನು ಮುಂಬರಿ ಹುಗಿಯುವದು ಎನ್ನುತ್ತಾರೆ.

     ಮೈಮೇಲೆ ಪಿತ್ತದ ಗಂದೆಗಳು ಎದ್ದಾಗ ಇದರ ಎಲೆಯ ರಸವನ್ನು ಸೇವಿಸುವದು, ಮತ್ತು ಮೈಗೆ ಬಳಿಯುವದು ಅನೇಕ ಕಡೆ ರೂಢಿ ಯಲ್ಲಿದೆ.ಎಲೆಯ ರಸಕ್ಕೆ ಕಫವನ್ನು ಕರಗಿಸುವ ಗುಣವಿದೆ.ಎಲೆಗಳ ರಸವನ್ನು  ಮಕ್ಕಳಿಗೆ ಶುದ್ಧ ಕಲ್ಲುಸಕ್ಕರೆ ಬೆರೆಸಿ ಕುಡಿಯಲು ಕೊಡಬೇಕು. ಆರೆಂಟು ಎಲೆಗಳನ್ನು ಬಾಡಿಸಿ ರಸವನ್ನು ತೆಗೆದು ಅದಕ್ಕೆ ಸಿಹಿಯಾಗುವಷ್ಟು ಜೇನು ಅಥವಾ ಕಲ್ಲುಸಕ್ಕರೆ ಸೇರಿಸಿ ಕುಡಿಯಬೇಕು. ಮಕ್ಕಳಿಗೆ ಒಂದು ಚಮಚ ರಸದಂತೆ ದಿನಕ್ಕೆ ಮೂರು ಬಾರಿ ಕೊಡಬೇಕು. ಭೇದಿಯಲ್ಲಿಯೂ ಇದು ಉತ್ತಮ ಮನೆಮದ್ದು. ಕೊಲೆರಾ ರೋಗಾಣುಗಳನ್ನು ಗುಣ ಪಡಿಸುವ ಗುಣವಿದೆಯೆಂದು ತಿಳಿದು ಬರುತ್ತದೆ. ಕಾಲರಾ ರೋಗದಲ್ಲಿ ಇದರ ನಾಲ್ಕಾರು ಎಲೆಗಳನ್ನು ಜಜ್ಜಿ ಕುದಿಸಿ ಆರಿಸಿದ ನೀರಿನಲ್ಲಿ ತಿಕ್ಕಿ ಸೋಸಿ ಕುಡಿಯಲು ಕೊಡಬೇಕು. ಈ ಕ್ರಮವನ್ನು ಮೊದಲು ಅರ್ಧ ತಾಸಿಗೊಮ್ಮೆ ಬಳಿಕ ತಾಸಿಗೊಮ್ಮೆ ನಡೆಸಬೇಕು.

ಎಲೆಗಳ ರಸ ಮತ್ತು ಅಷ್ಟೇ ಪ್ರಮಾಣದ ಎಳ್ಳೆಣ್ಣೆ ಸೇರಿಸಿ ತಲೆಯೆಣ್ಣೆಯನ್ನು ತಯಾರಿಸಿಕೊಳ್ಳಬಹುದು. ಈ ಎಣ್ಣೆಯನ್ನು ನಿತ್ಯ ತಲೆಗೆ ಹಾಕುವದರಿಂದ ತಲೆ ತಂಪಾಗುವುದು. ಕಣ್ಣುರಿ ಕಡಿಮೆಯಾಗುವದು.ಒಳ ವಸ್ತ್ರದ ಹೊಲಸು, ಬೆವರು ಮತ್ತು ಬಟ್ಟೆಯ ಬಿಗುವಿನ ಕಾರಣ ತುರಿಕಜ್ಜಿಯಾದರೆ ಸಂಬಾರಸೊಪ್ಪು, ಅರಿಶಿನಪುಡಿ, ಇವನ್ನು ಬೆಣ್ಣೆಯಲ್ಲಿ ಅರೆದು ಮುಲಾಮು ಮಾಡಿಟ್ಟುಕೊಂಡು ದಿನಕ್ಕೆ ಒಂದೆರಡು ಸಲ ಹಚ್ಚಿದರೆ ಗುಣವಾಗುತ್ತದೆ. ಚೇಳು ಪಡ್ಚೆಹುಳ[ ಶತಪದಿ]ಇತ್ಯಾದಿ ವಿಷ ಕೀಟಗಳು  ಕಚ್ಚಿದಾಗ ಕೂಡಲೆ ಎಲೆಯನ್ನು ಜಜ್ಜಿದ ರಸ ಹಚ್ಚ ಬೇಕು. ಎಲೆಯ ಹಸಿ ರಸವನ್ನು ಹಣೆಗೆ ಹಚ್ಚಬೇಕು.

ರೋಗವಿಲ್ಲದಾಗ ಇದನ್ನು ಆಹಾರವಾಗಿಯೂ ಬಳಸುತ್ತಾರೆ.  ಇದರಿಂದ ಹಲವು ಬಗೆಯ ಅಡುಗೆಯನ್ನು ತಯಾರಿಸಿ ಉಣ್ಣುತ್ತಾರೆ
 
ಸಣ್ಣ ಪಾತ್ರೆಯಲ್ಲಿ ಆರೆಂಟು ಎಲೆ, ಆರು ಕರಿಮೆಣಸು ಅರ್ಧಚಮಚ ಜೀರಿಗೆ, ಒಂದು ಚಮಚ ತುಪ್ಪ ಅಥವಾ ಬೆಣ್ಣೆ ಹಾಕಿ ಸಣ್ಣ ಉರಿಯಲ್ಲಿ ಜೀರಿಗೆಯ ಪರಿಮಳ ಬರುವವರೆಗೆ ಬಾಡಿಸಿಕೊಂಡು ಅದನ್ನು ಅರ್ಧ ಹಿಡಿ ತೆಂಗಿನಕಾಯಿಸುಳಿಯೊಂದಿಗೆ ಅರೆದು ಹುಳಿ ಮಜ್ಜಿಗೆ ಕೂಡಿಸಿ. ತಂಬುಳಿ ತಯಾರಿಸುತ್ತಾರೆ


     ಎರಡು ಎಲೆಯನ್ನು ಉಪ್ಪು ಹುಳಿ ಬೆಲ್ಲ ಎರಡು ಒಣ ಮೆಣಸು ಹಾಕಿ ಬೇಯಿಸಿರಿ ಒಂದು ಹಿಡಿ ಕಾಯಿಸುಳಿ ಜೊತೆ ಅರೆಯಿರಿ. ಒಣಮೆಣಸಿನ ಒಂದೆರಡು ತುಂಡು ಚಿಟಿಕೆ ಸಾಸಿವೆ ಮತ್ತು ಉದ್ದಿನಬೇಳೆ ಹಾಕಿ ವಗ್ಗರಣೆ ಮಾಡಿ ಗೊಜ್ಜು, ತಯಾರಿಸುತ್ತಾರೆ. 
ಅನೇಕ ರೋಗವನ್ನು ಹತೋಟಿಯಲ್ಲಿಡುವ ಔಷಧೀಯ ಗುಣಗಳುಳ್ಳ ಸಾವಿರ ಸಂಬಾರ ಸೊಪ್ಪಿನ ಬೇಡಿಕೆ ಇತ್ತೀಚಿಗೆ ಹೆಚ್ಚುತ್ತಿರುವುದು ಗಮನಾರ್ಹ.

ಸಾವಿರ ಸಂಬಾರ ಸೊಪ್ಪಿನ ಈ ಗಿಡವನ್ನು ಕುಂಡದಲ್ಲಿ ಅಥವಾ ಮನೆಯ ಮುಂದೆ ಬೆಳೆಸಿಕೊಂಡರೆ ಇದು ಮನೆಯ ಅಂದವನ್ನು ಹೆಚ್ಚಿಸುತ್ತದೆ. ಒಂದು ಗಿಡ ಬೆಳೆ ಸಲು ಒಂದು   ಗೇಣುದ್ದದ  ಟೊಂಗೆ ಸಾಕು. ಪ್ರಯತ್ನಿಸಿರಿ.

Thursday 9 August, 2012


           ತಿಗಳಾರಿ ಲಿಪಿ

                  ಉತ್ತರಕನ್ನಡ ಜಿಲ್ಲೆಯಲ್ಲಿ  ದೊರೆತ ಒಂದು ವಿಶೇಷ ಬಗೆಯ ಲಿಪಿಯನ್ನು ಕಣ್ಣಾರೆ ಕಂಡು ಆ ಬಗ್ಗೆ ಪುಸ್ತಕದಲ್ಲಿ ದಾಖಲಿಸುವಲ್ಲಿ ಮೊದಲಿಗರಾದ ಇಬ್ಬರು ಮಹನೀಯರಲ್ಲಿ ವಿದೇಶಿಯರಾದ ಬುಖಾನನ್ [1801]ಒಬ್ಬರಾದರೆ ಇನ್ನೊಬ್ಬರು ಕಾರವಾರದವರಾದ  ಎಸ್. ಸಿಲ್ವಾ. 

              ಎಸ್. ಸಿಲ್ವಾ. ಇವರು  ಕೆನರಾ  ಗೆಜಿಟಿಯರದ ಪರಿಷ್ಕರಣದ  ಬಗ್ಗೆ ಮಾಹಿತಿ ಸಂಗ್ರಹಿಸುವ ಕಾರ್ಯವನ್ನು ಕೈಕೊಂಡ ಸಂದರ್ಭದಲ್ಲಿ ದೊರೆತ ಮಾಹಿತಿಯನ್ನು ಇಂಗ್ಲಿಷಿನಲ್ಲಿ ಬರೆದರು. ಇದನ್ನು  ಶ್ರೀ ಎಂ. ಎನ್. ಭಂಡಾರಕರ ಕನ್ನಡಕ್ಕೆ ಅನುವಾದಿಸಿದರೆಂದು  ಕಾರವಾರ ಜಿಲ್ಲಾ ದರ್ಶನ ಈ ಪುಸ್ತಕದಲ್ಲಿ ಎಸ್. ಸಿಲ್ವಾ ತಿಳಿಸುತ್ತಾರೆ.  ಇದು ಪ್ರಕಟವಾದ ಕಾಲ 1962 ಎಂದು  ತಿಳಿಯಲಾಗಿದೆ.  ಇವರು ತಮ್ಮ ಪುಸ್ತಕದಲ್ಲಿ ದಾಖಲಿಸಿದ ತಿಗಳಾರಿ ಲಿಪಿಯ ಛಾಯಾ ಚಿತ್ರ ಇಲ್ಲಿದೆ.  


ಎರಡನೆಯದು 1985ರಲ್ಲಿ [ಶಾಂತಿನಾಯಕ] ಸ್ವತಃ ತಿಗಳಾರಿ ಬಲ್ಲವರಿಂದ  ಕರ್ಕಿಯಲ್ಲಿ ಬರೆಯಿಸಿಕೊಂಡದ್ದಾಗಿದೆ. ಇದರಲ್ಲಿ ಕನ್ನಡ ನಾಡಿನ ಕನ್ನಡ ಲಿಪಿಯ ಪ್ರಭಾವವು ತಿಗಳಾರಿ ಲಿಪಿಯ ಮೇಲಾಗಿರುವ ಪ್ರಮಾಣವನ್ನು  ಗುರುತಿಸಬಹುದು. 

Saturday 4 August, 2012


          ಕಲ್ಲುಕೆಸುAriopsis peltata Nimmo Araceae


     ಮಳೆಗಾಲದಲ್ಲಿ ಕರಾವಳಿಯ ಜಂಬಿಟ್ಟಂಗಿಯ ಕಲ್ಲಿನ ಪಾಗಾರದ ಮೇಲೆ ಪಾಗಾರವನ್ನೆಲ್ಲ ಮುಚ್ಚುವಂತೆ ಒತ್ತಾಗಿ ಬೆಳೆಯುವ ಕಲ್ಲುಕೆಸು, ಆಹಾರವಾಗಿ ಬಳಕೆಯಲ್ಲಿದೆ.

    ಎಲೆಗಳು ಅಮೃತಬಳ್ಳಿಯ ದೊಡ್ಡ ಎಲೆಗಳನ್ನು ಹೋಲುತ್ತವೆ. ಎರಡು ಇಂಚಿನಿಂದ ಅರ್ಧ ಅಡಿಯವರೆಗೆ ಎತ್ತರವಾಗಿ ಬೆಳೆಯುತ್ತವೆ.ಇದಕ್ಕೆ ಮರಕೆಸುವಿಗಿರುವಂತೆ ಸಣ್ಣ ಗಡ್ಡೆಗಳಿದ್ದು ಇವು ಕಲ್ಲಿನ ಸಂದಿಯಲ್ಲಿ ಸಿಕ್ಕಿಕೊಂಡಿರುತ್ತವೆ. ಕಪ್ಪು ಮೈಯುಳ್ಳ ಹ್ಡೆಯಂತಹ ದೇಟಿನೊಳಗೆ ಲಂಬ ನಿಲುವಿನ ಹೂವು.

    ಜನಪದ ಆಹಾರ : ಈ ಕೆಸುವಿನೆಲೆಗಳನ್ನು ಶ್ರಾವಣಮಾಸದ ಮೊದಲೇ ಬಳಸುವದು ಪದ್ಧತಿಯಾಗಿದೆ. ಇದರ ಮುಗ್ದ ಮೋಹಕ ಸೌಂದರ್ಯದ ಜೊತೆಗೆ ಆಹಾರ ಯೋಗ್ಯವಾದ ರುಚಿಯು ಇದೆ. ಇದರ ಎಲೆಯಿಂದ ಪತ್ರೊಡೆ, ಕರಗ್ಲಿ ಮುಂತಾದ ವ್ಯಂಜನಗಳನ್ನು ತಯಾರಿಸಿ ಸೇವಿಸುತ್ತಾರೆ. ಇದರ ಮುದ್ದೆ ಪತ್ರೊಡೆ ಹೆಚ್ಚು ಬಳಕೆಯಲ್ಲಿವೆ..

   ಜನಪದ ಅಡುಗೆ1: ಮುದ್ದೆ ಪತ್ರೊಡೆ : ಇದರ ಒಂದು ಬೊಗಸೆ (ಸುಮಾರು ನಲವತ್ತು)ಎಲೆಗಳನ್ನು ಕೊಚ್ಚಿರಿ, ಎರಡು ನೀರುಳ್ಳಿಗಳನ್ನು ಕೊಚ್ಚಿರಿ. 6 ಒಣಮೆಣಸು 1 ಚಮಚ ಕೊತಂಬರಿ, 5 ಮೆಂತೆಕಾಳು, ಕಾಲು ಚಮಚ ಸಾಸಿವೆಯನ್ನು ಎಣ್ಣೆ ಹನಿಸಿಕೊಂಡು ಬೇರೆ ಬೇರೆಯಾಗಿ ಹುರಿಯಿರಿ. 

ಅರ್ಧ ಕಡಿ (1 ಕಪ್ಪು) ಕಾಯಿಸುಳಿ, ಎರಡು ತಾಸು ನೆನೆಯಿಸಿದ 4 ಚಮಚ ಕಡಲೇಬೇಳೆ, 1 ನೆಲ್ಲಿಕಾಯಿ ಗಾತ್ರದ ಹುಣಸೆ ಹುಳಿ, 2 ಚಮಚ ಬೆಲ್ಲ ಹಾಗೂ ಹುರಿದ ಮಸಾಲೆಯ ಪರಿಕರಗಳನ್ನು ಕೂಡಿಸಿ ತುಸು ನೀರನ್ನು ಸೇರಿಸಿ ಮುದ್ದೆಯಾಗಿ ಅರೆಯಿರಿ. 
ಕೊಚ್ಚಿದ ಸೊಪ್ಪು, ಉಳ್ಳಾಗಡ್ಡೆ ಹಾಗೂ ಒಂದುವರೆ ಚಮಚ ಉಪ್ಪನ್ನು ಈ ಮುದ್ದೆಗೆ ಕೂಡಿಸಿ ತುಸು ಕಿವುಚಿರಿ. ಲಿಂಬುಗಾತ್ರದ ಮುದ್ದೆ ಕಟ್ಟಿರಿ, ಅದನ್ನು ತುಸು ಒತ್ತಿ ಚಪ್ಪಟೆಮಾಡಿರಿ ಇಡ್ಲಿಯಂತೆ ಬೇಯಿಸಿರಿ. ಈ ಇಡ್ಲಿಗೆ ರವೆಯನ್ನು ಹಚ್ಚಿ ತುಸು ಎಣ್ಣೆ ಬಿಟ್ಟು ದೋಸೆ ಹಂಚಿನ ಮೇಲೆ ಹುರಿದು ತಿನ್ನಬಹುದು. ಒಗ್ಗರಣೆ ಮಾಡಿ ಅದರಲ್ಲಿ ಪತ್ರೊಡೆಗಳನ್ನು ಹರಿದು ಪುಡಿಮಾಡಿ ಸ್ವಲ್ಪ ಕಾಯಿ ಸುಳಿಹಾಕಿ ಕೆದಕಿದರೆ 'ಪತ್ರೊಡೆ ಪುಡಿ' ತಯಾರಾಗುತ್ತದೆ. 

 ಸಾಧ್ಯತೆ : ಪಾಲಕ ಸೊಪ್ಪನ್ನು ಬಳಸಿ ತಯಾರಿಸುವಂತೆ ಇದರ ಎಲೆಯಿಂದ ಬಜಿ, ಸಾರು, ಚಟ್ನಿ ಮಾಡಬಹುದು.
ಇದನ್ನು ಹಳೆಯ ಜಂಬಿಟ್ಟಣಗಿಯ ಕಲ್ಲಿನ ಮೇಲೆ ಹಾಗೂ ತಂಪುಳ್ಳ ನೆಲದ ಮೇಲೆ ಬೆಳೆಸಿಕೊಳ್ಳಬಹುದು.

Tuesday 31 July, 2012


  ಹವ್ಯಕರ ಕತೆಗಳು - ಚಿತ್ರಾಟೆ ಕಾಳಣ್ಣಾ
   

          ವಂದೂರ್ನಲ್ಲಿ ವಂದ್ ಗವ್ಡಾಯಿದ್ದಿದ್ದಾ. ಅಂವ್ನ ಹತ್ರಾ ವಂದ್ ಯತ್ನ ಜೋಡಿದ್ದಿತ್ತು. ಯಾರೂ ನೇಗ್ಲ ಹಿಡ್ದೇ
ಗದ್ದೆಯಾ ಆ ಯೆತ್ತು ಗೆದ್ದೆ ಹೂಡ್ತಿತ್ತು. ಅಂವಂಗೆ ಚಲೋ ಆಗ್ತಿತ್ತು. ವಂದಿನಾ ಅಂವಾ ಯೆತ್ ತೆಕ್ಕಂಡಿ ಗದ್ದೆಗೋದಾ. ಹೂಡೂಲ್ ಬಿಟ್ಟಿಕ್ಕಿ ಮನೆಗ್ ಬಂದಾ. ಅದೇ ಹೊತ್ತಿಗೆ ಅರ್ಸಾ ಪ್ರದಾನಿ ಅಲ್ಲಿಗೆ ತಿರ್ಗಾಡತ್ನ ಬಂದಿದ್ದೊ. ಅವ್ಕೊಕೆ ಆಶ್ಯಾತು. ಸುಮ್ಮಂಗೆ ಯೆತ್ ಹೊಡ್ಕೊಂಡ್ ನೆಡದ್ದೊ.ಗವ್ಡಾ ಸುಮಾರ್ ಹೊತ್ನಮೇಲೆ ಬಂದ್ ನೋಡ್ತಾ.ಯೆತ್ತೆ ಇಲೆ. ಅದ್ಯಾರೋವಾ ಅಂದೊ.``ಯೀಗ್ ಮಾತ್ರಾ ಅರ್ಸಾ ಹೊಡ್ಕಂಡ್ ಹೋಯ್ದಾ''. ಹೇಳಿ. ಅಂವಂಗೆ ಬಾಳ್ ಬೆಜಾರಾತು. ರಾತ್ರಿಡಿ ವರ್ಕ್ವೇ ಬಂದಿಲ್ಲೆ. ಅವಂಗೆ ಕಯ್ ಮುರ್ದಾಂಗಾತು. 

ಚಿತ್ರಾಟೆ ಕಾಳಣ್ಣಾ ವಂದ್ ಮುಕೆಲಿ ಹೊಕ್ಕಂಡಿ ``ಗವ್ಡಾ ಗವ್ಡಾ ಯೆಂತಾ ಆತು? ''ಕೇಳ್ತು ಅಂವಾ ತಾ ಗೆದ್ದೆಲಿ ತನ್ ಯೆತ್ ಬಿಟ್ಟಿಕ್ಕಿ ಬಂದಿದ್ದೆ. ಅರ್ಸಾ ಪ್ರದಾನಿ ಬಂದಿದ್ವಡಾ. ಅವ್ಕೊ ಯೆತ್ನ ಜೋಡಿ ಹೊಡ್ಕಂಡ ನೆಡದ್ವಡಾ. ಹೇಳ್ತಾ. ಆಗಾ ಚಿತ್ರಾಟೆ ಕಾಳಣ್ಣಾ ಕೇಳ್ತು. ``ಹೀಂಗಾತಾ? ನಾ ತತ್ತೆ ನಿನ್ ಎತ್ನಾ'' ಅಂತು. ಆಂ! ``ನಿನ್ನತ್ರಂತೂ ಆಗ್ತು !''ಅಂದಾ ಗೌಡ. 

``ನೋಡು ನಾಡ್ದೀಗ್ ಬೆಳಗಪ್ಪಲ್ಲಿವರೆಗೆ ನಿನ್ ಯೆತ್ತು ಕೊಟ್ಗೆಲಿದ್ದು ಹೇಳ್ ತೆಳ್ಕೊ ಅಂತು. ಚಿತ್ರಾಟೆ ಕಾಳಣ್ಣಾ. ಮರ್ದಿನಾ ರಾತ್ರೆ ಚಿತ್ರಾಟೆ ಕಾಳಣ್ಣಾ ಅರ್ಸ್ನ ಮನೆಗೆ ಹೊರ್ಟ್ತು. ದಾರಿ ಮೆಲ್ ಕೆಪ್ಯಣ್ಣಾ ಶಿಕ್ತು. 

  ``ಚಿತ್ರಾಟೆ ಕಾಳಣ್ಣಾ ಚಿತ್ರಾಟೆ ಕಾಳಣ್ಣಾ ಯೆಲ್ಲೀಗ್ ಹೋಗ್ತೇ'' ಕೇಳ್ತು. ``ಅರ್ಸ್ನ ಮನೆಗೆ ಹೋಗ್ತೇ ಗವ್ಡ್ನ ಯೆತ್ ತತ್ತೇ ''ಅಂತು. 

  `` ನಾನೂ ಬರ್ಲೋ ''ಕೇಳ್ತು ಕೆಪ್ಯಣ್ಣಾ `ಹೂ ನೀನೂ ಬಾ' ಅಂತು. ಚಿತ್ರಾಟೆ ಕಾಳಣ್ಣಾ .ಚಿತ್ರಾಟೆ ಕಾಳಣ್ಣಾ ಕೆಪ್ಯಣ್ಣಾ ಮುಂದೋಗ್ತೊ.

ಹಿಂಗೇ ಮುಂದೋಗ್ತಿರಾಕಾರೆ ದೊಣ್ಯಣ್ಣಾ ಶಿಕ್ತು.``ಚಿತ್ರಾಟೆ ಕಾಳಣ್ಣಾ, ಕೆಪ್ಯಣ್ಣಾ ಯೆಲ್ಲಾ ಯೆಲ್ಲೀಗ್ ಹೋಗ್ತ್ರೇ'' ಕೇಳ್ತು. ದೊಣ್ಯಣ್ಣಾ
`` ಅರ್ಸ್ನ ಮನೆಗೆ ಹೋಗ್ತೊ ಗವ್ಡ್ನ ಯೆತ್ ತತ್ತೊ'' ಅಂತು ಚಿತ್ರಾಟೆ ಕಾಳಣ್ಣಾ.`` ನಾನೂ ಬರ್ಲೋ'' ಕೇಳ್ತು ದೊಣ್ಣಣ್ಣಾ. ``ಹೂ ನೀನೂ ಬಾ'' ಅಂತು. ಚಿತ್ರಾಟೆ ಕಾಳಣ್ಣಾ . 
ಚಿತ್ರಾಟೆ, ಕಾಳಣ್ಣಾ, ಕೆಪ್ಯಣ್ಣಾ ,ದೊಣ್ಯಣ್ಣಾ ಮುಂದೋಗ್ತೊ. 

ಮುಂದೋಗ್ನಿ ರಾಕಾರೆ ಹಾವಣ್ಣಾ ಶಿಕ್ತು. ಚಿತ್ರಾಟೆ ಕಾಳಣ್ಣಾ, ಕೆಪ್ಯಣ್ಣಾ ದೊಣ್ಯಣ್ಣಾ ಯೆಲ್ಲಾ ಯೆಲ್ಲೀಗ್ ಹೋಗ್ತ್ರೇ ಕೇಳ್ತು. ಹಾವಣ್ಣಾ 

  ``ಅರ್ಸ್ನ ಮನೆಗೆ ಹೋಗ್ತೊ ಗವ್ಡ್ನ ಯೆತ್ ತತ್ತೊ'' ಅಂತು. ಚಿತ್ರಾಟೆ ಕಾಳಣ್ಣಾ ನಾನೂ ಬರ್ಲೋ ಕೇಳ್ತು ಹಾವಣ್ಣಾ
``ಹೂ ನೀನೂ ಬಾ ''ಅಂತು ಚಿತ್ರಾಟೆ ಕಾಳಣ್ಣಾ.  ಚಿತ್ರಾಟೆ ಕಾಳಣ್ಣಾ, ಕೆಪ್ಯಣಾ, ದೊಣ್ಯಣ್ಣಾ, ಹಾವ ಣ್ಣಾ 
ಮುಂದೋಗ್ತೊ. 

   ಹಿಂಗೇ ಮುಂದೋಗ್ತಿರಾಕಾರೆ ಹಾಂತೆಯಣ್ಣಾ ಶಿಕ್ತು. ಚಿತ್ರಾಟೆ ಕಾಳಣ್ಣಾ, ``ಕೆಪ್ಯಣ್ಣಾ ದೊಣ್ಯಣ್ಣಾ ಹಾವಣಾ ಯೆಲ್ಲಾ ಯೆಲ್ಲೀಗ್ ಹೋಗ್ತ್ರೇ ''ಕೇಳ್ತು. ಹಾಂತೆಯಣ್ಣಾ 

   ``ಅರ್ಸ್ನ ಮನೆಗೆ ಹೋಗ್ತೊ ಗವ್ಡ್ನ ಯೆತ್ ತತ್ತೊ'' ಅಂತು. ಚಿತ್ರಾಟೆ ಕಾಳಣ್ಣಾ ನಾನೂ ಬರ್ಲೋ ಕೇಳ್ತು ಹಾಂತೆಯಣ್ಣಾ 

`  `ಹೂ ನೀನೂ ಬಾ'' ಅಂತು. ಚಿತ್ರಾಟೆ ಕಾಳಣ್ಣಾ
   ಚಿತ್ರಾಟೆ ಕಾಳಣ್ಣಾ ,ಕೆಪ್ಯಣ್ಣಾ ,ದೊಣ್ಯಣ್ಣಾ, ಹಾವ ಣ್ಣಾ ,  ಹಾಂತೆಯಣ್ಣಾ ಯೆಲ್ಲಾ ಮುಂದೋಗ್ತೊ.

      ಮುಂದೋಗ್ತಿ ರಾಕಾರೆ ಕಟ್ಟೆರ್ನ ಸಾರಿ ಶಿಕ್ತು. ``ಚಿತ್ರಾಟೆ ಕಾಳಣ್ಣಾ ಕೆಪ್ಯಣ್ಣಾ ದೊಣ್ಯಣ್ಣಾ ಹಾಂತೆಯಣ್ಣಾ ಯೆಲ್ಲಾ ಯೆಲ್ಲೀಗ್ ಹೋಗ್ತ್ರೇ? ''ಕೇಳ್ತು ಕಟ್ಟೆರ್ನಸಾರಿ .
``ಅರ್ಸ್ನ ಮನೆಗೆ ಹೋಗ್ತೊ ಗವ್ಡ್ನ ಯೆತ್ ತತ್ತೊ'' ಅಂತು ಚಿತ್ರಾಟೆ ಕಾಳಣ್ಣ .

``ತಂಗೋವು ಬತ್ತೊ'' ಅಂತು ಕಟ್ಟೆರ್ನ ಸಾರಿ. ``ಹೂ ಬನ್ನಿ ''ಅಂತು ಚಿತ್ರಾಟೆ ಕಾಳಣ್ಣಾ. ಹೀಂಗೆಯಾ ಚಿತ್ರಾಟೆ ಕಾಳಣ್ಣಾ ,ಕೆಪ್ಯಣ್ಣಾ ,ದೊಣ್ಯಣ್ಣಾ ,ಹಾಂತೆಯಣ್ಣಾ ಕಟ್ಟೆರ್ನ ಸಾರಿ ಯೆಲ್ಲಾ ವಟ್ಗೂಡ್ಕಂಡಿ ಅರ್ಸ್ನ ಮನೆಗ್ ಹೋದೊ. 

ದೊಣ್ಯಣ್ಣಾ ಕದ್ನ ಮುಕೆಲಿ? ಹೊಕ್ಕಣ್ತು. ಕೆಪ್ಯಣ್ಣಾ ವಲೆ ಬೂದಿಲಿ ಹೊಕ್ಕಣ್ತು. ಹಾಂತೆ ದೀಪ್ದ ಗುಡ್ನದ್ ಕೆಳ್ಗೆ ಕೂತ್ಗಣ್ತು. ಕಟ್ಟೆರ್ನ ಸಾರಿ ತೆಂಗ್ನ ಮರದ್ ಕೆಳ್ಗೆ ಇದ್ಗಣ್ತು. ಚಿತ್ರಾಟೆ ಕಾಳಣ್ಣ ಅವ್ಕೊ ಗೆಲ್ಲಾವಾ ಮೊದ್ಲೇ ಯೆಂತೆಂತಾ ಮಾಡೊ ಯೆಲ್ಲಾವಾ ಹೇಳ್ಕೊಟ್ಟಿಕ್ಕಿತ್ತು. 

ಅರ್ಸ್ನ ಹೆಣ್ತಿ ಕದಾ ಹಾಕೂಲೆ ಹೇಳಿ ಬಂತು. ಬಂದದ್ದೆ ತಡಾ ದೊಣ್ಯಣ್ಣಾ ಬಡಾ ಬಡಾ ಬಡಾ ಬಡಾ ಬಡತ್ತು. ಅದು ಯಿಲ್ಲಿ ಯಾರೋ ಬಂದಿಕಿದೊ ಹೇಳಿ ದೀಪಾ ದೊಡ್ಡಾ ಮಾಡೂಲೋತು. ಹಾಂತೆ ಪಟಕ್ನೆ ದೀಪಾ ನಂದ್ಸಾಕ್ತು. ಹಾಂಗೆಯಾ ಅರ್ಸಾ ಮಂಚ್ದಿಂದಾ ಕೆಳಗಿಳ್ಯೊ ನೋಡ್ದಾ. 

ಕಾಲ್ ಕೆಳ್ಗೆ ಯಿಟ್ಟಿದ್ದೇ ತಡಾ. ಹಾವಣ್ಣಾ ಕಾಲ್ಸುತ್ತಾಯ್ಕಂಬುಡ್ತು. ಅಂವಾ ಅಯ್ಯಯ್ಯೋ ಹೇಳಿ ಕೂಗ್ದಾ. ಅಂವ್ನ ಹೆಣ್ತಿ ದೀಪಾ ಹಚ್ದಾಂಗೆ ಹಾತೆ ನಂದ್ಸ್ ನಂದ್ಸ್ ಹಾಕ್ತು. ಅಂತೂವಾ ಹೆಂಗೋ ಮಾಡ್ ಅಂವಾ ಕಾಲಿಂದಾ ಹಾವ್ ಬಿಡಸ್ಕಂಡಾ. ಮನಿ ಕಂಡಾ. 

ಮದ್ರಾತ್ರ್ ಗೆಟ್ ಅಂವಂಗೆ ಉಚ್ ಹೊಯ್ಯೂಲ್ ಬಂತು. ಯೆದ್ದಿ ಹೆರಂಗೋದಾ. ಕಟ್ಟೆರ್ನಸಾರಿಯೆಲ್ಲಾ ವಟ್ಗೂಡ್ಕಂಡಿ ಕಾಲ್ ಕಚ್ ಕಚ್ ತೆಗೆದ್ಬುಡ್ತು. ಹಾಂಗೆ ಕುಡಿಕತ್ತೇ ಅರ್ಸ ವಳಂಗೆ ವೋಡ್ತ್ನೆ ಬಂದಾ. ಬಾಗ್ಲಲ್ಲಿ ದೊಣ್ಯಣ್ಣಾ ಅವ್ನ ತಲ್ ತಲೆಮೆಲ್ ಕೊಡ್ತು. ಅಂತೂ ಮಂಚಕ್ಕೋದಾ. 

ಅಸ್ಟೊತ್ತಿಗೆ ಬೆಳಗುಂಜಾಮಾಗತ್ನಾ ಬಂದಿತ್ತು. ಅರ್ಸ್ನ ಹೆಣ್ತಿ ಬೆಂಕಿ ವಟ್ಟೂಲೆ ಹೇಳಿ ವಲೆ ಬಳಿಗೋತು. ಬೂದಿ ಮೊಗುಲೆ ಹೇಳಿ; ಮೊಕಾ ಕೆಳ್ಗ್ ಮಾಡ್ಕಂಡಿ ವಲೆಗ್ ಕಯ್ ಹಾಕ್ತು. ಕೆಪ್ಯಣ್ಣಾ ತಡಾ ಮಾಡಿದ್ದೇ, ಯಿಲ್ಲೆ ಬುಸಕ್ ಬುಸಕ್ನೆ ಬೂದಿ ಮೊಕಕ್ಕೆ ತೋಕ್ತು. ಕಣ್ಣೀಗೆಲ್ಲಾ ಬೂದಿ ಮುಚ್ಚಿ ಕಣ್ ವಡೂಲೆ ಆಯ್ದಿಲ್ಲೆ. ಆಗಾ ರಾಜಾಯೆಂತಕ್ಕೆ ಹಿಂಗೆಲ್ಲಾ ಆಪ್ಲೆ ಹಣ್ಕೋತನೊ? ಹಿಂಗೆಲ್ಲಾ ಮಾಡ್ಡೋರು ಯಾರು? ಹೇಳಿ ಹಲಬುಲ್ ಹಣಕ್ ಬುಟ್ಟಾ. ಆಗಾ ಚಿತ್ರಾಟೆ ಕಾಳಣ್ಣಾ ಮುಕೆಲಿದ್ದದ್ದು ದೊಡ್ಡಕ್ಕೆ ಅರ್ಸಾ ಅರ್ಸಾ ಗವ್ಡ್ನ ಮನೆಯೆತ್ತು ಬೇಕೋ? ಈಗ ಸಾಕೋ ಹೇಳಿ ಕೇಳ್ತು. ಆಗಾ ಅರ್ಸು ಮಾರಾಯ್ರಾ ಯೆತ್ತೂ ಬೆಡಾ ಗಿತ್ತೂ ಬೆಡಾ ಜೀಂವಾ ವಂದ್ ಯಿರ್ಸ್ ಕಂಡಿ ಯೆತ್ನ ಸಂಗ್ತಿಗೆ ನಮ್ ಕೊಟ್ಗೆದ್ ಮತ್ ನಾಕ್ ಜೋಡಿ ಬೇಕಾದ್ರೂ ಕೊಡ್ತೆ. ತೆಕಂಡೋಗಿ. ಯಿನ್ ಮಾತ್ರ ಗವ್ಡ್ನ ಯೆತ್ನ ಸುದ್ದೀಗ್ ಬತ್ನಿ ಲ್ಯಾ ''ಅಂದಾ. ಕೊಟ್ಗೆಗ್ ಹೋಗಿ ತನ್ ಕೊಟ್ಗೆಲಿದ್ ನಾಲ್ಕ್ ಯೆತ್ನ ಜೋಡಿ ಗವ್ಡ್ನ್ ಮನೆ ಯೆತ್ತು ಯೆಲ್ಲಾ ಬಿಟ್ಟಾಕ್ದಾ. ಚಿತ್ರಾಟೆ ಕಾಳಣ್ಣಾ ತನ್ ಪಂಗ್ಡಾಯೆಲ್ಲಾ ಕಟ್ಗಂಡಿ ಯೆತ್ ಹೊಡ್ಕಂಡಿ ಗವ್ಡ್ನ್ ಮನೆ ಕೊಟ್ಗೆಗೋತು. ಕಟ್ಟಾಕ್ತು. ಬೆಳ್ಗಾದ್ಕೂಡ್ಲೆಯಾ ಗವ್ಡ್ನ್ ಹೆಣ್ತಿ. ``ಅತೊ ಯೆತ್ತೆಲ್ಲಾ ಬಂದಿಕಿದಕು ಹುಲ್ಲಾಕ್ರೋ'' ಅಂತು. ಗವ್ಡಾ ವೋಡೋಗ್ ನೋಡ್ತಾ. 

ಹವ್ದು ಸಂಗ್ತಿಗೆ ಚಲೋ ಚಲೋ ಮತ್ ನಾಲ್ಕು ಯತ್ನ ಜೋಡಿದ್ದು. ಅಂವಂಗೆ ಸಂತೋಶಾತು    ``ಯಾರಾಯಿಕ್ಕು ಯೀ ಕೆಲ್ಸಾ ಮಾಡ್ದೋರು?'' ಹೇಳೀ ಹೇಳ್ತ್ನೆಯಿರಾಕಾರೆ ಚಿತ್ರಾಟೆ ಕಾಳಣ್ನ ಪಂಗ್ಡಾ ಬಂತು. ಗವ್ಡ್ಂಗೆ ಚಿತ್ರಾಟೆ ಕಾಳಣ್ನ ಕೆಲ್ಸಾ ಇದು ಹೇಳಿ ತೆಳತ್ತು. ನಾಳೆಗ್ ನಮ್ಮನೆಗೆ ಊಟಕ್ ಬನ್ನಿ ಪಾಯ್ಸಾ ಮಾಡ್ ಬಡಸ್ತೆ ಹೇಳ್ದಾ. ಮರ್ದಿನಾ ಯೆಲ್ಲಾ ಊಟಕ್ ಬಂದೊ. ಪಾಯ್ಸಾ ಉಂಡ್ಕಂಡಿ ಸಂತೋಶ್ದಿಂದಾ ಮನೆಗೊದೊ. 


     
ಸಾಮಾಜಿಕ ಉಪ ಭಾಷೆ
    
   ಭಾಷೆ  ನಿಂತ ನೀರಲ್ಲ. ಅದು ಸದಾ ಪರಿವರ್ತನ ಶೀಲವಾದದ್ದು. ಪರಿವರ್ತನೆ ಒಮ್ಮೆಲೆ ಗೋಚರಿಸುವದಿಲ್ಲ. ಮನಸ್ಸಿಗೆ ವೇದ್ಯವಾಗುತ್ತದೆ. 
      
     ನಾನು ಸುಮಾರು ಐವತ್ತು ವರ್ಷಗಳಿಂದ ನನ್ನ ಮಾತೃಭಾಷೆಯ ಪರಿಸರವುಳ್ಳ ಪ್ರದೇಶದಿಂದ  ಸುಮಾರು ನೂರು ಕಿ. ಮೀ ಗಳಷ್ಟು ಅಂತರದಲ್ಲಿ ವಾಸವಾಗಿದ್ದೇನೆ.  ಅಲ್ಲಿಯ ನನ್ನ ಸಂಬಂಧಿಕರೊಂದಿಗೆ  ಭಾಷಾ ಸಂಪರ್ಕದಲ್ಲಿದ್ದೇನೆ.  ದೂರವಾಣಿಯಲ್ಲಿ ಮಾತಾಡುತ್ತೇನೆ.  ವರ್ಷದಲ್ಲಿ ಆರೆಂಟು ಬಾರಿಯಾದರೂ ಅಲ್ಲಿಗೆ ಹೋಗಿ ಬರುತ್ತೇನೆ.  ನನ್ನ ಇಲ್ಲಿಯ ಮನೆಯಲ್ಲಿ ನನ್ನ ಕುಟುಂಬದ ಸದಸ್ಯರೊಂದಿಗೆ ನನ್ನ ಮಾತೃ ಭಾಷೆಯಲ್ಲಿ ಮಾತಾಡುತ್ತೇನೆ. ನಾನು ಈಗ ಮಾತಾಡುವ ಭಾಷೆಯು ನಾನು ಈ ಊರಿಗೆ  ಬರುವ  ಸಂದರ್ಭದ  ಮಾತೃಭಾಷೆಯಲ್ಲದೆ ಬೇರೆಯಲ್ಲವೆಂದು ತಿಳಿದುಕೊಂಡಿದ್ದೆನು.  
    
    ಆದರೆ ಒಂದು ದಿನ ನನ್ನ ಮಾತೃ ಭಾಷೆಯನ್ನೇ ತಮ್ಮ ತಮ್ಮ  ಮಾತೃ ಭಾಷೆಯಾಗುಳ್ಳ ಮತ್ತು ಆ ಭಾಷೆಯನ್ನು ಸಾಮಾಜಿಕ ಭಾಷೆಯ್ನನ್ನಾಗಿ ಹೊಂದಿದ ತಮ್ಮ ಕೇರಿಗಳಲ್ಲಿ ವಾಸವಾಗಿರುವ ನನ್ನ ಗೆಳತಿಯರ ಗುಂಪೊಂದು ನನ್ನನ್ನು ಭೆಟ್ಟಿಯಾದಾಗ ಇದೇನೆ ಶಾಂತಕ್ಕಾ  ``ನಿನ್ ಮಾತ ಬೆರೆ ಆಗಿದ ಆ ಬದಿ ಬಟ್ರಂಗ್ ಮಾತಾಡ್ತಿ''  ಎಂದಾಗ ನಾನು ಮಾತಾಡುತ್ತಿರುವದು ನಾಡವರ ಭಾಷೆಯೇ ಅಗಿದ್ದರೂ, ನನಗರಿವಿಲ್ಲದೆ ನನ್ನ ಇಲ್ಲಿಯ ಪರಿಸರದ  ಭಾಷೆಯ ಪ್ರಭಾವವು ನನ್ನ[ತವರಿನ]  ಹಿಂದಿನ  ಊರಿನ   ನನ್ನ  ಪರಿಸರದ ಭಾಷೆಯ ಮೇಲೆ  ಉಂಟಾಗಿದೆಯೆಂದು  ನನಗೆ ಅರಿವಾಯಿತು. 

     ಈ ಬಗೆಯ ಭಾಷೆ  ಬದಲಾವಣೆಯ ಪ್ರಕ್ರಿಯೆ ಕೇವಲ ನನ್ನ ಈ ಒಂದು ಭಾಷೆಗೆ ಮಾತ್ರ ಸೀಮಿತ ವಾದದ್ದಲ್ಲ.  ಮೌಖಿಕವಾದ ಎಲ್ಲ ಬಗೆಯ ಭಾಷೆಗಳಲ್ಲಿ ಇದು ನಡೆಯುತ್ತದೆ.  ಲಿಪಿ ಬದ್ಧ ವಾದ ಆಧುನಿಕ ಭಾಷೆಗಳನ್ನೂ  ಇದು ಬಿಟ್ಟಿಲ್ಲ.  ಹವ್ಯಕ ಸಾಮಾಜಿಕ  ಭಾಷೆಯಲ್ಲಿಯೂ ಇದು ನಡೆಯುತ್ತಿದೆ.  
        

   ಹೊನ್ನಾವರ ತಾಲೂಕಿನ ಪಂಚಗ್ರಾಮದ ಭಾಷೆ ಅಥವಾ ಕುಮಟಾದ ಹಳ್ಳಿಗರ ಭಾಷೆಗಿಂತ ಉಚ್ಚಾರದಲ್ಲಿ ಶಬ್ದ ಬಳಕೆಯಲ್ಲಿ ವ್ಯತ್ಯಾಸವನ್ನು ಹೊಂದಿದೆ. ಹಳ್ಳಿಗರು ಇದನ್ನು ಆಗಾಗ ಗುರುತ್ರಿಸುತ್ತಾರೆ. ಅವರು ಹೇಳುವಂತೆ ಪ್ರತಿ ಮೂರು ಮೈಲು ಅಂತರಗಳಲ್ಲಿ ಈ ವ್ಯತ್ಯಾಸಗಳು ಕಂಡು ಬರುತ್ತದೆ. ಆದರೆ  ಅನೇಕ ಭಾಷೆಗಳ ಗತಿಯನ್ನು ಗಮನಿಸಿ ಹೇಳುವುದಾದರೆ ಅವು ಪ್ರತಿ ವರ್ಷ ಹೊಸ ಶಬ್ದಗಳನ್ನು ಸ್ವೀಕರಿಸುತ್ತಾ ಹಳೆಯ ಶಬ್ದಗಳನ್ನು ಬಿಡುತ್ತಾ ಸಾಗುವದು ಕಂಡುಬರುತ್ತದೆ. ಈ ದಿಸೆಯಲ್ಲಿ ಸಾಮಾಜಿಕ ಉಪ ಭಾಷೆಗಳ ದೋಣಿ  ವೇಗವಾಗಿ ಸಾಗುತ್ತದೆ. ಎತ್ತ ಸಾಗಿದೆ ಕಾಲವೇ ನಿರ್ಣಯಿಸಬೇಕು. ಹಳೆಯ ಭಾಷಾ ನೆನಪನ್ನು ಮೆಲಕಾಡಿಸುವವರಿಗೆ ಇಲ್ಲಿ ಹೊನ್ನಾವರ ಪಂಚ ಗ್ರಾಮದ  ಹವ್ಯಕ ಸಾಮಾಜಿಕ ಉಪಭಾಷೆಯ ಚೌಕಟ್ಟಿನಲ್ಲಿರುವ  ಮತ್ತು ಹಿರಿಯರು ಮಕ್ಕಳಿಗಾಗಿ ಹೇಳಿರುವ ಹಾಗೂ ಹಿರಿಯರಿಂದ ಕೇಳಿ ಕಲಿತು ಮಕ್ಕಳು ಹೇಳಿದ ಕೆಲವು ಕತೆಗಳನ್ನು ಬ್ಲಾಗಿಸುತ್ತಿದ್ದೇನೆ. ಈ ಹವ್ಯಕ ಉಪಭಾಷಾ ಜನಪದ ಕತೆಗಳನ್ನು ಹವ್ಯಕರ ಕತೆಗಳು ಎಂಬ ಮಾಲಿಕೆಯಲ್ಲಿ ನೀವು  ಕಾಣಬಹುದು.