Monday 16 July, 2012

ನಮ್ಮ ಗಿಡ ಮರಬಳ್ಳಿಗಳು-ಕಾಡರಶಿನ


 ಕಾಡರಶಿನ -Curcuma Zedoaria Roscoe

      ಹೆಸರೇ ಸೂಚಿಸುವಂತೆ ಇದು ಊರಂಚಿನ ಕಾಡುಗಳಲ್ಲಿ ತಂತಾನೆ ಬೆಳೆದುಕೊಳ್ಳುವ ಅರಿಶಿನ ಕುಟುಂಬಕ್ಕೆ ಸೇರಿದ ಒಂದು ಪ್ರಭೇದ. ಕಚೋರ ಎಂಬ ಗಿಡವನ್ನು ತಿಳಿದಿರುವ ಕೆಲವರು ಕಾಡರಿಶಿನವನ್ನು ಕಚೋರವೆಂದು ಕರೆಯುವುದುಂಟು. ಯಾಕೆಂದರೆ ಇದು ನಾಡಿನಲ್ಲಿ ಬೆಳೆಯುವ ಕಚೋರದಂತೆ ಪರಿಮಳಭರಿತವಾದ ಗಡ್ಡೆಯನ್ನು ಹೊಂದಿ ಕಾಡರಿಶಿನವನ್ನು ಗುರುತಿಸುವುದು ಸುಲಭ. ಹೇಗೆ? ಎಲೆಯನ್ನು ನೋಡಿರಿ.ಎಲೆಗಳು ಅರಶಿನದ ಎಲೆಗಳನ್ನು ಹೋಲುತ್ತಿವೆಯಾದರೂ ಇದರ ಎಲೆಯ ಅರ್ಧ ಭಾಗದ ನಟ್ಟ ನಡುವೆ ಉದ್ದವಾಗಿ ಕಂದು ಬಣ್ಣದ ಪಟ್ಟಿಯಿರುತ್ತದೆ. ಬಿಸಿಲು ಹೆಚ್ಚಾದಾಗ ಈ ಬಣ್ಣ ಕೆಂಪು ಮಿಶ್ರಿತ ಕಂದು ಬಣ್ಣಕ್ಕೆ ತಿರುಗುತ್ತದೆ. ಮಳೆಗಾಲದ ಪ್ರಾಂಭದಲ್ಲಿ ಎಲೆ ಹೊರಬರುವ ಮುನ್ನವೆ ಹೂ ಕಾಣಿಸಿಕೊಳ್ಳುತ್ತದೆ. ಹೂಗಳ ಬಣ್ಣ ಕೆಂಪು, ಮೇಲೆ ಗುಲಾಬಿ ಬಣ್ಣದ ದಪ್ಪ ರಕ್ಷಕ ದಳವು ದೊಡ್ಡದಾಗಿ ಕಾಣಿಸಿ ಕೊಳ್ಳುತ್ತದೆ.                   


      ಬೇಸಿಗೆಯಲ್ಲಿ ಗಿಡವು ಸಾಯುತ್ತದೆ. ಆಗ ಗಡ್ಡೆಯನ್ನು ಅಗೆದು ಅದರ ಮೇಲ್ಪದರನ್ನು ಚಾಕುನಿಂದ ಕೆತ್ತಿದರೆ ಒಳಗೆ ನೀಲಿ ಬಣ್ಣ ಕಾಣಿಸಿಕೊಳ್ಳುತ್ತದೆ. ಈ ನೀಲಿ ಬಣ್ಣದ ಗಡ್ಡೆ ತುಂಬ ಕಹಿ, ಆದರೆ ಇದರಲ್ಲಿ ಅತ್ಯಂತ ಬೆಳ್ಳಗಿನ ಮೈದಾ ಹಿಟ್ಟನ್ನು ಹೋಲುವ ಕಹಿಯಿಲ್ಲದ ಹಿಟ್ಟು ತುಂಬಿಕೊಂಡಿರುತ್ತದೆ. ಈ ಹಿಟ್ಟನ್ನು ಹೊರತೆಗೆಯುವದು ಜಾಣ್ಮೆಯ ಹಾಗೂ ಶ್ರಮದ ಕೆಲಸವಾಗಿರುತ್ತದೆ.

      ಕಾಡಿನ ಬಳಿಯ ಜನರು ಈ ಗಡ್ಡೆಗಳನ್ನು ಅಗೆದು ತಂದು ಗಡ್ಡೆಯ ಮೇಲ್ಭಾಗವನ್ನು ಹೆರೆಸಿ ತೆಗೆದು ಕೊಚ್ಚಿ ಅರೆಯುವ ಕಲ್ಲಿನಲ್ಲಿ ಅರೆಯುತ್ತಾರೆ. ಅರೆದು ತೆಗೆದ ಕಲಕವನ್ನು ಕೊಡಗಟ್ಟಲೆ ನೀರು ಹಿಡಿಯುವ ತಪ್ಪಲೆಗಳಲ್ಲಿ ಕದಡುತ್ತಾರೆ. ಕದಡಿದ ಕಲಕವನ್ನು ಕೆಲತಾಸು ಹಣಿಯ ಬಿಟ್ಟರೆ ಮೇಲುಗಡೆ ತನ್ನಲ್ಲಿಯ ಹಿಟ್ಟನ್ನು ನೀರಿಗೆ ಬಿಟ್ಟುಕೊಟ್ಟು ಸಿಪ್ಪೆಯ ಜಿಡುಕು ತೇಲುತ್ತಿರುತ್ತದೆ. ಇದನ್ನು ಹೊರಹಾಕುವ ಸಲುವಾಗಿ ಪಾತ್ರೆಯಲ್ಲಿಯ ನೀರನ್ನು ನೆಲಕ್ಕೆ ಮೆಲ್ಲಗೆ ಮರುಗುತ್ತಾರೆ ಪಾತ್ರೆಯ ತಳದಲ್ಲಿ. ಭಾರವಾದ  ಹಿಟ್ಟು ನಿಂತಿರುತ್ತದೆ. ಇದಕ್ಕೆ ಮತ್ತೆ ಕೊಡ ತುಂಬ ನೀರನ್ನು ಹಾಕಿ ಕದಡುತ್ತಾರೆ. ಇದು ಹಣಿದ ಬಳಿಕ  ಮತ್ತೆ ಮೇಲಿನ ನೀರನ್ನು ಮೆಲ್ಲಗೆ ಚಲ್ಲುತ್ತಾರೆ. ಈರೀತಿ ಮೂರು ನಾಲ್ಕು ಸಾರೆ ಮಾಡುತ್ತಾರೆ. ಕೊನೆಯಲ್ಲಿ ಹಿಟ್ಟನ್ನು ಅಡಕೆಯ ಹಾಳೆಗೆ ಹಾಕಿ ಬಿಸಿಲಿನಲ್ಲಿ ಮೂರು ನಾಲ್ಕು ದಿನ ಒಣಗಿಸುತ್ತಾರೆ. ಬಾಟ್ಲಿಯಲ್ಲಿ ಸಂಗ್ರಹಿಸಿ ರಕ್ಷಿಸುತ್ತಾರೆ. ಇದನ್ನು ಕಚರಾಹಿಟ್ಟು ಎನ್ನುವದುಂಟು. ಈ ಹಿಟ್ಟು ಆಹಾರದಂತೆ ಔಷಧದಂತೆ ಬಳಕೆಯಲ್ಲಿದೆ.

      ಒಂದೆರಡು ಚಮಚ ಕಚರಾ ಹಿಟ್ಟನ್ನು ಒಂದು ಕಪ್ ನೀರಿನಲ್ಲಿ ಗಂಟಿಲ್ಲದಂತೆ ಕದಡಿ ಕುದಿಯುತ್ತಿರುವ ಹತ್ತು ಕಪ್ ನೀರಿಗೆ ಹಾಕಿದರೆ ಕೆಲವು ಸೆಕೆಂಡುಗಳಲ್ಲಿ ಪಾಯಸ ಸಿದ್ಧವಾಗುತ್ತದೆ. ಅತಿಸಾರ ರೋಗಿಗಳು ಈ ಪಾಯಸಕ್ಕೆ ತುಸು ಉಪ್ಪು ಬೆರಸಿ ದಿನಕ್ಕೆ ನಾಲ್ಕಾರು ಬಾರಿ ಸೇವಿಸಿದರೆ, ರೋಗ ದೂರವಾಗುತ್ತದೆ. ಇದಕ್ಕೆ ಹಾಲು, ಸಕ್ಕರೆ, ಯಾಲಕ್ಕಿ ಪುಡಿ, ಗೇರುಬೀಜದ ತುಂಡುಗಳನ್ನು ಸೇರಿಸಿದರೆ  ಅತಿಥಿಗಳ ಜೊತೆ ಮೆಲ್ಲಬಹುದಾದ ರುಚಿಯಾದ ಖೀರು ತಯಾರಾಗುತ್ತದೆ. ಈ ಹಿಟ್ಟಿನಿಂದ ಸೂಪ್ ತಯಾರಿಸಬಹುದು. ಬೇಸಿಗೆಯಲ್ಲಿ ಬಾಳಕ ಮಾಡಿ ಸಂಗ್ರಹಿಸಿಕೊಳ್ಳಬಹುದು. ಈ ಗಿಡವನ್ನು ,ಇದರ ಹಿಟ್ಟನ್ನು ಒಮ್ಮೆ ಕಣ್ಣಾರೆ ಕಾಣಿರಿ. ಪಾಯಸ ಅಟ್ಟು ಸೇವಿಸಿರಿ. ಹಿಟ್ಟಿನ ತಯಾರಿಕೆಯಲ್ಲಿ ಹಳ್ಳಿಗರ ಆಸಕ್ತಿ ದೂರವಾಗುತ್ತಿದೆ. ನೀವು ಇದಕ್ಕೆ ಹೆಚ್ಚಿನ ಬೆಲೆಕೊಟ್ಟು ಕೊಂಡುಕೊಂಡು ತಯಾರಕರನ್ನು ಪ್ರೋತ್ಸಾಹಿಸಿರಿ.  ಇದನ್ನು ಎರ್ರಾಬಿರಿ ಕಿತ್ತು ಇದರ ಸಂತತಿ ನಾಶವಾಗದಂತೆ ಕಾಪಾಡಿಕೊಳ್ಳಲು ತಿಳಿಸಿರಿ.[ಹಿಟ್ಟು ತಯಾರಿಸುವಾಗ ಉಳಿದಿರುವ ಸಿಪ್ಪೆ ಸಣ್ಣಗಣ್ಣೆಗಳನ್ನು ಇದು ಬೆಳೆಯಲು ತಕ್ಕ ಪರಿಸರದ ನೆಲದಲ್ಲಿ ಚಲ್ಲದರೆ ಅಲ್ಲಿ ಗಿಡಗಳು ಹುಟ್ಟಿಕೊಳ್ಳುತ್ತವೆ ನೀವು ನಿಮ್ಮ ಪಾಳು ಭೂಮಿಯಲ್ಲಿ ನೆಟ್ಟು ಬೆಳೆಯಿರಿ. ಹಿಟ್ಟು ತಯಾರಿಸಿ ಬಳಸಿರಿ. ಭಾಗದ ನಡುವೆ ಕಡು ನೀಲಿಬಣ್ಣದ ಗೆರೆಯಿರುತ್ತದೆ. ಗಡ್ಡೆಯ ನೀಲಿ ಬಣ್ಣದ ಪದರು ಕಂಡುಬರುತ್ತದೆ. ಗಡ್ಡೆ ಕಹಿರುಚಿಯುಳ್ಳದ್ದು.
       
      ಗಿಡವು ಒಣಗಿದ ಬಳಿಕ ಗಡ್ಡೆಯನ್ನು ಕಿತ್ತು, ತೊಳೆದು, ಕೊಚ್ಚಿ, ಅರೆದು, ನೀರಿನಲ್ಲಿಟ್ಟು ಸೋಸಿ, ಬಿಳಿಯ ಹಿಟ್ಟನ್ನು ಪಡೆಯುತ್ತಾರೆ. ಈ ಹಿಟ್ಟಿನಲ್ಲಿ ಕಹಿಗುಣವಿರುವುದಿಲ್ಲ. ಆರಾರೂಟಿನ ಹಿಟ್ಟಿನಂತೆ ಬೆಳ್ಳಗಿರುತ್ತದೆ. ಕರಾವಳಿಯ ಹಳ್ಳಿಗರು ಇದನ್ನು ಕಚರಾ ಹಿಟ್ಟು ಎನ್ನುತ್ತಾರೆ. ಇದು ಆರಾರೂಟಿನ ಹಿಟ್ಟಿಗಿಂತ ಹೆಚ್ಚು ಔಷಧ ಗುಣಗಳನ್ನು ಹೊಂದಿದೆಯೆಂಬ ನಂಬಿಕೆಯಿದೆ.
       
     ಇದರ ಹಿಟ್ಟಿನಿಂದ ಗಂಜಿ, ಪಾಯಸ, ಕಡಿ, ಚಿಪ್ಸ ತಯಾರಿಕೆ ರೂಢಿಯಲ್ಲಿದೆ. ಅತಿಸಾರ, ಅಜೀರ್ಣಜ್ವರ, ವಿಷಮಜ್ವರಗಳಲ್ಲಿ ಇದರ ಗಂಜಿಯನ್ನು ನೀಡಿ ಆರೈಕೆ ಮಾಡುತ್ತಾರೆ.
       
      ಒಂದು ಚಿಕ್ಕ ಗಡ್ಡೆ ನೆಟ್ಟರೆ ಮುಂದಿನ ವರ್ಷ ಹತ್ತು ಚದುರ ಅಡಿ ಜಾಗಕ್ಕೆ ನೆಡಬಹುದಾದಷ್ಟು ಬೀಜದ ಗಡ್ಡೆ ದೊರೆಯತ್ತದೆ. ಹೆಚ್ಚು ಆರೈಕೆ ಕೇಳದ ಇದನ್ನು ನಿಮ್ಮ ನೆಲದಲ್ಲಿ ನೆಟ್ಟು, ಗಡ್ಡೆ ಪಡೆದು ಹಿಟ್ಟು ತಯಾರಿಸಿಕೊಳ್ಳಿರಿ. ಹಿಟ್ಟು ಮೂರ್ನಾಲ್ಕು ವರ್ಷ ಕೆಡುವುದಿಲ್ಲ. ಪೇಟೆಯಲ್ಲಿ 200 ರೂ.ಗೆ ಒಂದು ಕೆ.ಜಿ ದೊರೆಯಬಹುದಾದರೂ ಅದರಲ್ಲಿ ಕಲಬೆರಕೆ ಇದ್ದೀತು. ನಿಮ್ಮ ಆರೋಗ್ಯಕ್ಕಾಗಿ ಇದನ್ನು ನೆಟ್ಟು ಬೆಳೆಸಿ ಹಿಟ್ಟನ್ನು ಪಡೆಯುವದೇ ಉತ್ತಮ.







No comments:

Post a Comment