Sunday 17 June, 2012

ನಮ್ಮ ಗಿಡ ಮರಬಳ್ಳಿಗಳು-ವಗ್ಗರಣೆ ಸೊಪ್ಪು-


ನಮ್ಮ ಗಿಡ ಮರ ಬಳ್ಳಿಗಳು ಈ ಮಾಲಿಕೆಯಲ್ಲಿ ಮಕ್ಕಳಿಗಾಗಿ ಬರೆದ ಸಸ್ಯ ಮಾಹಿತಿ ಇದೆ. 
1. ವಗ್ಗರಣೆ ಸೊಪ್ಪು  (Murraya.koenegii{L]Sprengel)



      ಉಪ್ಪಿಟ್ಟು  ಸಾರು  ಪಲ್ಯ ಮುಂತಾದ ಅಡುಗೆಗಳಿಗೆ  ವಗ್ಗರಣೆ ಮಾಡುವಾಗ ಬಳಸುವ ಪರಿಮಳದ ಸೊಪ್ಪನ್ನು ಕನ್ನಡದಲ್ಲಿ ವಗ್ಗರಣೆಸೊಪ್ಪು ಮತ್ತು ಕರಿಬೇವು ಎನ್ನುತ್ತಾರೆ. ಇದಕ್ಕೆ ಕೊಂಕಣಿಯಲ್ಲಿ  ಪೋಣ್ನಾ ಫಾಲೊ ಸಂಸ್ಕೃತದಲ್ಲಿ ಮಹಾನಿಂಬ ಎಂಬ ಹೆಸರುಗಳಿವೆ. ಇದರ ಸಸ್ಯಶಾಸ್ರ್ತೀಯ ಹೆಸರು ಮುರ್ರಯ ಕೊಯಿನಿಗಿ ಇದರ ಕುಲವು ರುಟೇಸಿ.

 ಇದು  ಸದಾ ಹಸಿರಾಗಿರುವ ಸುಂದರ ಚಿಕ್ಕ ಮರ. ಇದು ಹಿಮಾಲಯ ತಪ್ಪಲಿನಲ್ಲಿ ಹೆಚ್ಚು ಕಂಡುಬರುತ್ತದೆಯೆನ್ನುತ್ತಾರೆ. ಹಣ್ಣುಗಳು ಚಿಕ್ಕ ನೇರಳೆ ಹಣ್ಣಿನ ಗಾತ್ರದಲ್ಲಿರುತ್ತವೆ. ಒಂದು ಹಣ್ಣಿಗೆ ಒಂದೇ ಬೀಜ. ಹಕ್ಕಿಗಳು ಇದರ ಹಣ್ಣನ್ನು 
ತಿನ್ನುತ್ತವೆ.ದೂರದೂರ ಒಯ್ದು ಬೀಜ ಪ್ರಸಾರಮಾಡುತ್ತವೆ.

೨ ಚಿತ್ರ  ಸ್ವಂತ
      ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದ ಕರಿಕಾನಮ್ಮ ಬೆಟ್ಟದಲ್ಲಿ ಹಾಗೂ ಗೇರಸೊಪ್ಪ ಕಾಡಿನಲ್ಲಿ ಇದು ನೈಸರ್ಗಿಕವಾಗಿ ಬೆಳೆಯುತ್ತವೆಂದು ತಿಳಿದು ಬಂದಿದೆ. ಕರಾವಳಿಯಲ್ಲಿ ಅನೇಕರು ಅಡುಗೆಯ ಉಪಯೋಗಕ್ಕಾಗಿ  ಮನೆಯಂಗಳದ ಬಳಿಯಲ್ಲಿ ಈ ಗಿಡವನ್ನು ನೆಟ್ಟು ಪೋಷಿಸುತ್ತಾರೆ. ಬಯಲು ಸೀಮೆಯಲ್ಲಿ ಇದರ ಬೇಸಾಯವು ನಡೆಯುತ್ತದೆ.ಮಾರಾಟಗಾರರು ಅಲ್ಲಿಂದ ಇದರ ಗರಿಗಳನ್ನು ತಂದು ಪರ ಊರಿನ ತರಕಾರಿಯ ಸಂತೆಯಲ್ಲಿ ಮಾರಾಟ ಮಾಡುತ್ತಾರೆ. ಇದರ ಬಳಕೆ ವಗ್ಗರಣೆಗಷ್ಟೇ ಮೀಸಲಾದದ್ದಲ್ಲ. ಇದರ ಸೊಪ್ಪಿಗೆ ಅಡುಗೆಯಲ್ಲಿ ಉತ್ತಮ ಸ್ಥಾನವಿದೆ.  ಬೇಳೆಸಾರು. ಮಜ್ಜಿಗೆ, ಪಳಿದ್ಯ, ಉಪ್ಪಿಟ್ಟು ಪಲ್ಯ ಚಟ್ಟಂಬೊಡೆ ಚಿತ್ರಾನ್ನ, ಚಟ್ನಿ ಪುಡಿ, ತಂಬುಳಿ ಮುಂತಾದ ಅಡುಗೆಗೆ ಹೊಸರುಚಿಯನ್ನು ಪರಿಮಳವನ್ನು ಇದು ಒದಗಿಸುತ್ತವೆ.ಜಾಣ ಮಹಿಳೆಯರು ಅಡುಗೆಯಲ್ಲಿ ಇದರ ಎಲೆಯ್ನ್ನ ಹೆಚ್ಚು ಹೆಚ್ಚು ಉಪಯೋಗಿಸುತ್ತಿದ್ದಾರೆ. ಬೆಂಗಳೂರಿನ ಕೆಲವು ಮಹಿಳೆಯರು ಇದರ ಎಲೆಯನ್ನು ತಂಪಿನಲ್ಲಿ ಒಣಗಿಸಿ ರಾಗಿಗೆ ಸೇರಿಸಿ ರಾಗಿಮುದ್ದೆಯ ಹಿಟ್ಟು ತಯಾರಿಸಿಕೊಳ್ಳುತ್ತಾರೆ. ಈ ವಿಧಾನವು ರಾಗಿ ಮುದ್ದೆಗೆ ಪರಿಮಳವನ್ನು ನೀಡಿ ಅದರ ಸತ್ವವನ್ನು ಹೆಚ್ಚಿಸುತ್ತದೆ. ವಗ್ಗರಣೆಗೆ ಹಾಕಿದ ಎಲೆಗಳನ್ನು ತಿನ್ನದೆ ತೆಗೆದು ಹೊರಗೆಸೆಯುವವರೇ ಹೆಚ್ಚು. ಇದನ್ನು ತಪ್ಪಿಸಲು ಸಣ್ಣಗೆ ಕೊಚ್ಚಿ ವಗ್ಗರಣೆಗೆ ಸೇರಿಸುವದು ಲೇಸು. 
ಎಲೆಯಲ್ಲಿ ಪಿಷ್ಟ ಸಸಾರಜನಕರಂಜಕ ಕಬ್ಬಿಣ ಎ.ಬಿ.ಸಿ. ಜೀವಸತ್ವಗಳಿವೆಯೆಂದು,ಆಧುನಿಕ ಆಹಾರ ವಿಜ್ಞಾನವು ತಿಳಿಸುತ್ತದೆ. ಇದರ ಎಲೆಗಳು ಮನುಷ್ಯರ ಅನೇಕ ರೋಗ ನಿವಾರಣೆಯಲ್ಲಿಯೂ ಪ್ರಮುಖ ಸ್ಥಾನದಲ್ಲಿವೆ. ಮನೆಮದ್ದಿನಲ್ಲಿ ಇದರ ಉಪಯೋಗವಿದೆ.ಅನುಭವಿಗಳು ಇದರ ಇನ್ನಷ್ಟು ಉಪಯೋಗವನ್ನು ತಿಳಿಸಿದ್ದಾರೆ. ಇವುಗಳನ್ನು ಅನುಸರಿಸುವದು ಉತ್ತಮ.
  ಜ್ವರ ಅಥವಾ ವಾಂತಿ ಭೇದಿಯಿಂದ ಬಳಲುತ್ತಿರುವವರಿಗೆ ಇದರ ಎಲೆಯನ್ನು ಸೇರಿಸಿ ಕುದಿಸಿದ ನೀರನ್ನು ಆಗಾಗ ಕುಡಿಯ್ಲ ಕೊಡಬೇಕು. ತಂಡಿ ಜ್ವರಕ್ಕಾಗಿ ಮೆಣಸಿನಕಾಳು ಹುಣಸೆ ಹಣ್ಣು ಬೆಲ್ಲ ಸೇರಿಸಿ ಕಷಾಯ ತಯಾರಿಸುವಾಗ ಈ ಕಷಾಯಕ್ಕೆ ಒಂದು ಗರಿ ವಗ್ಗರಣೆ ಎಲೆ ಸೇರಿಸಿದರೆ ಕಷಾಯ ಇನ್ನಷ್ಟು ಪರಿಣಾಮಕಾರಿಯಾಗುತ್ತದೆ. ಗರ್ಭಿಣಿಯರು ಇದರ ಎಲೆಯ ರಸಕ್ಕೆ ತುಸು ಲಿಂಬು ರಸ ಸೇರಿಸಿ ದಿನಕ್ಕೆ ಎರಡು ಮೂರು ಚಮಚ ಎಲೆಯ ರಸ ಸೇರಿಸಿ ದಿನಕ್ಕೆ ಮೂರು ಬಾರಿ ನೆಕ್ಕುತ್ತಿದ್ದರೆ ಅವರ ವಾಂತಿ ದೂರವಾಗುತ್ತದೆ. 
  ಸಕ್ಕರೆ ಕಾಯಿಲೆಯ್ರು ಪ್ರತಿದಿನ ಖಾಲಿ ಹೊಟ್ಟೆಯಲ್ಲಿ ಆರೆಂಟು ಹಸಿ ಎಲೆಯ್ನ್ನ ಜಗಿದು ನುಂಗಬೇಕು. ಬೊಜ್ಜು ಕರಗಿಸಿಕೊಳ್ಳ ಬಯಸುವವರು ಇದೇ ರೀತಿ ಸೇವನೆ ಮಾಡಬಹುದು. ಜೇನುತುಪ್ಪದೊಂದಿಗೆ ಇದರ ಸೇವನೆ ಮೂಲವ್ಯಾಧಿಯ  ನೋವನ್ನು ಕಡಿಮೆಮಾಡುತ್ತದೆ. ಎಸಿಡಿಟಿಯ್ಲ್ಲ ವಗ್ಗರಣೆ ಎಲೆಯ ರಸ ಅಥವಾ ತೊಗಟೆಯ ಪುಡಿಯನ್ನು ತುಸು ನೀರಿನಲ್ಲಿ ಕದಡಿ ಸೇವಿಸಬೇಕು. ಆಮಶಂಕೆ, ರಕ್ತಭೇದಿಯಲ್ಲಿ ಎಲೆಯ ಕಷಾಯ ಉತ್ತಮ 
  ಎಲೆಗಳನ್ನು ತಂಪಿನಲ್ಲಿ ಒಣಗಿಸಿ ಪುಡಿಮಾಡಿಟ್ಟುಕೊಂಡು ಆಗಾಗ ತಣ್ಣೀರಿಗೆ  ಒಂದು ಚಿಟಕೆ ಪುಡಿ ಸೇರಿಸಿ ಕುಡಿಯಿರಿ. ದೇಹಾರೋಗ್ಯಕ್ಕಾಗಿ ಇದರ ಎಲೆಯ್ನ್ನ ಅಡುಗೆಯಲ್ಲಿ ಸಾಕಷ್ಟು ಬಳಸಿರಿ. ಹಣ್ಣನ್ನು ತಿನ್ನಬಹುದು. ಎಲೆಯಲ್ಲಿ ಹಾಗೂ ಕಾಂಡ ಬೇರುಗಳ ಹೊರ ತೊಗಟೆಯಲ್ಲಿ ಮತ್ತು ಹೂವಿನಲ್ಲಿ ಜೀರ್ಣಶಕ್ತಿಯನ್ನು ಹೆಚ್ಚಿಸಿ, ಹಸಿವೆಯನ್ನು ಉತ್ತೇಜಿಸುವ ಗುಣವಿದೆ.  ಇವು  ಔಷಧ ಗುಣದಲ್ಲಿ ಮೇಲ್ಮಟ್ಟದಲ್ಲಿವೆ.  ಬೇರಿನ ತೊಗಟೆಯ ಕಷಾಯವು ಮೂತ್ರ ಸಂಬಂಧಿ ರೋಗಗಳಿಗೆ ಮದ್ದಾಗಿರುತ್ತದೆ. ತಲೆಗೂದಲು ಉದುರುತ್ತಿದ್ದರೆ, ತಲೆಗೆ ಬಳಸುವ ಎಣ್ಣೆಯಲ್ಲಿ ಒಂದು ಹಿಡಿ ಈ ಸೊಪ್ಪನ್ನು ಸೇರಿಸಿ ಎಲೆ ಗರಿಗರಿಯಾಗುವವರೆಗೆ ಕಾಸಿ ಎಣ್ಣೆ ತಯಾರಿಸಿ ಬಳಸಿರಿ.
ಚಿತ್ರ. ಅಂತರ ಜಾಲ ಆಗಾಗ ವೈದ್ಯರ ಬಳಿ ಹೋಗುವದನ್ನು ತಪ್ಪಿಸಿಕೊಳ್ಳಲು ನಿಮ್ಮ ಮನೆಯಲ್ಲಿ ಒಂದೆರಡು ವಗ್ಗರಣೆ ಸೊಪ್ಪಿನ ಗಿಡ ನೆಟ್ಟು ಅದಕ್ಕೆ ನೀರು, ಬಿಸಿಲು, ಗೊಬ್ಬರ ದೊರಕಿಸಿಕೊಟ್ಟು ಪ್ರೀತಿಯಿಂದ ಸಲಹಿರಿ.
  ಆಗ ಅದು ನಿಮ್ಮ ಮನೆದೇವರಾಗಿ  ನಿಮಗೆ ಆರೋಗ್ಯವನ್ನು ಆಯುಷ್ಯವನ್ನು ನೀಡಿ ನಿಮ್ಮನ್ನು ಆಶೀರ್ವದಿಸಲು ತಪ್ಪುವದಿಲ್ಲ. 

No comments:

Post a Comment